ಕಾಂಗ್ರೆಸ್ ಮುಕ್ತ ಜಿಲ್ಲೆಯಾದ ಕರಾವಳಿಯ ಉಡುಪಿ ಜಿಲ್ಲೆ ; ಗ್ರಾಮದಿಂದ ಜಿಲ್ಲೆಯವರೆಗೂ ಈಗ ಕಮಲದ ಕಲರವ..
ಉಡುಪಿ : ಕರಾವಳಿ ಅಂದರೆ ಸಾಕು ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳಿಗೆ ಭಯ ಆವರಿಸಿರುತ್ತದೆ. ಕರಾವಳಿ ಹಿಂದೂ ಸಂಘಟನೆಗಳ ಭದ್ರ ಕೋಟೆ ಎಂಬುವುದು ಹಳೇ ವಿಚಾರ. ಆದರೆ ಇದೀಗ ಭಾರತೀಯ ಜನತಾ ಪಕ್ಷವೂ ಕರಾವಳಿಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು ವಿರೋಧಿಗಳ ಕಣ್ಣು ಮತ್ತಷ್ಟು ಕೆಂಪಗಾಗಿಸಿದೆ.
1978ರಲ್ಲಿ ಜನಸಂಘವು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಉಡುಪಿಯಲ್ಲಿ ಪಾರುಪತ್ಯವನ್ನು ಸ್ಥಾಪಿಸಿತ್ತು. ಇಂದು ಮತ್ತೆ ಉಡುಪಿ ಜಿಲ್ಲೆ ಕಾಂಗ್ರೆಸ್ ಮುಕ್ತ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅಂದು ಮೊದಲ ಬಾರಿಗೆ ಪಕ್ಷವನ್ನು ಗೆಲ್ಲಿಸಿದ್ದ ಕೀರ್ತಿಗೆ ಪಾತ್ರವಾಗಿರುವ ಉಡುಪಿ ಇಂದು ಕಾಂಗ್ರೆಸ್ ಮುಕ್ತ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಗ್ರಾಮ ಪಂಚಾಯತ್ ನಿಂದ ಸಂಸದರವರೆಗೂ ಭಾರತೀಯ ಜನತಾ ಪಕ್ಷವೇ ಆಳುತ್ತಿತ್ತು. ಆದರೆ ಶಾಸಕರು ಹಾಗೂ ನಗರ ಸಭೆ ಮಾತ್ರ ಕಾಂಗ್ರೆಸ್ ಕೈನಲ್ಲಿತ್ತು. ಈ ಬಾರಿ ಉಡುಪಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಭಾರತೀಯ ಜನತಾ ಪಕ್ಷ ಭರ್ಜರಿ ಜಯಭೇರಿ ಭಾರಿಸುವ ಮೂಲಕ ಸಂಪೂರ್ಣ ಉಡುಪಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ನಂತರ ನಗರ ಸಭೆ ಕಾಂಗ್ರೆಸ್ ಆಡಳಿದಲ್ಲಿತ್ತು. ಇದೀಗ ನಗರಸಭೆಯೂ ಸಂಪೂರ್ಣವಾಗಿ ಬಿಜೆಪಿಮಯವಾಗಿದ್ದು ಉಡುಪಿ ಜಿಲ್ಲೆಯೇ ಕಾಂಗ್ರೆಸ್ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ಉಡುಪಿ ಜಿಲ್ಲೆಯ 5 ವಿಧಾನಸಾಭಾ ಕ್ಷೇತ್ರಗಳ ಶಾಸಕರು, ಅಂದರೆ ಉಡುಪಿ ಶಾಸಕ ಕೆ ರಘುಪತಿ ಭಟ್, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಮೆಂಡನ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೀಗೆ 5 ಕ್ಷೇತ್ರಗಳಲ್ಲೂ ಕಮಲದ ಪತಾಕೆ ರಾರಾಜಿಸುತ್ತಿದೆ.
ಇನ್ನು ಉಡುಪಿ, ಕುಂದಾಪುರ, ಕಾರ್ಕಳ ತಾಲೂಕಿನ ತಾಲೂಕ್ ಪಂಚಾಯತ್ ಕೂಡಾ ಭಾರತೀಯ ಜನತಾ ಪಕ್ಷದ್ದಾಗಿದೆ. ಉಡುಪಿ ಜಿಲ್ಲಾ ಪಂಚಾಯತ್, ಉಡುಪಿ ನಗರಸಭೆ, ಕುಂದಾಪುರ ಹಾಗೂ ಕಾರ್ಕಳ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಕೂಡಾ ಭಾರತೀಯ ಜನತಾ ಪಕ್ಷದ ಅಧಿಕಾರದಲ್ಲಿದೆ.
ಇತ್ತೀಚೆಗೆ ನಡೆದಿದ್ದ ಉಡುಪಿ ನಗರಸಭೆ ಚುನಾವಣೆಯಲ್ಲಿ ಕಳೆದ 50 ವರ್ಷಗಳ ಹಿಂದಿನ ಇತಿಹಾಸವನ್ನು ಭಾರತೀಯ ಜನತಾ ಪಕ್ಷ ಮತ್ತೆ ಹೊತ್ತು ತಂದಿದ್ದು. ಉಡುಪಿ ಶಾಸಕ ಕೆ ರಘುಪತಿ ಭಟ್ ಈ ಗೆಲುವನ್ನು ಉಡುಪಿಯ ಅಭಿವೃದ್ಧಿಯ ಹರಿಕಾರ ಮಾಜಿ ಸಚಿವ ದಿ.ಡಾ.ವಿ.ಎಸ್.ಆಚಾರ್ಯರಿಗೆ ಅರ್ಪಿಸಿದ್ದರು.
ಬಿಜೆಪಿ ಭದ್ರಕೋಟೆ ಎಂದೇ ಹೆಸರಾಗಿರುವ ಕರಾವಳಿಯ ಉಡುಪಿ ಜಿಲ್ಲೆ ಸಂಪೂರ್ಣ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದ್ದು ದಕ್ಷಿಣ ಭಾರತದಲ್ಲೇ ಹೊಸ ದಾಖಲೆಯನ್ನು ಬರೆದಿದೆ. “ನಮ್ಮದು ಕಾಂಗ್ರೆಸ್ ಮುಕ್ತ ಜಿಲ್ಲೆ” ಎಂದು ಉಡುಪಿ ಬಿಜೆಪಿಗರು ಸಂಭ್ರಮಿಸುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಎಂಬ ಸಂಕಲ್ಪವನ್ನು ಮುಂದಿಟ್ಟಿದ್ದರು. ಈ ನಿಟ್ಟಿನಲ್ಲಿ ಇಡಿಯ ಭಾರತದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂಬ ಪರಿಕಲ್ಪನೆ ಮೂಡಿತ್ತು. ಮಾತ್ರವಲ್ಲದೆ ಈ ಸ್ಲೋಗನ್ ರಾಜ್ಯಗಳಿಗೂ, ಜಿಲ್ಲೆಗಳಿಗೂ ಹಾಗೂ ಗ್ರಾಮದವರೆಗೂ ವಿಸ್ತರಿಸಿತ್ತು. ಕಾಂಗ್ರೆಸ್ ಮುಕ್ತ ಗ್ರಾಮ, ಕಾಂಗ್ರೆಸ್ ಮುಕ್ತ ಜಿಲ್ಲೆ ಎಂಬ ಪಣವನ್ನು ಕೇಸರಿ ಪಡೆಗಳು ಕಟ್ಟಿಕೊಂಡಿದ್ದವು. ಆದರೆ ಕರಾವಳಿಯ ಈ ಜಿಲ್ಲೆ ಇದೀಗ ಕಾಂಗ್ರೆಸ್ ಮುಕ್ತವಾದ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿದೆ.
