ಕಾಂಗ್ರೆಸ್ನಿಂದ ದೇಶದ ಅಭಿವೃದ್ಧಿಗೆ ಹಿನ್ನಡೆ: ಸಂಸದೆ ಶೋಭಾ ಕರಂದ್ಲಾಜೆ
Udupi
ವಿಪಕ್ಷಗಳಿಂದ ಸಂಸದ್ ಕಲಾಪಕ್ಕೆ ಅಡ್ಡಿಪಡಿಸಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಕರೆ ನೀಡಿದಂತೆ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಧರಣಿ ನಡೆಸಿದ್ರು. ಈ ವೇಳೆ ಮಾತನಾಡಿದ ಶೋಭಾ, ಕಾಂಗ್ರೆಸ್ ನಿಂದ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸಂಸದ್ ಕಲಾಪಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿ ದೇಶದ ಜನತೆಗೆ ಅವಮಾನ ಮಾಡಿದೆ. ಈ ಬೆಳವಣಿಗೆ ದೇಶಕ್ಕೆ ಮಾರಕವಾಗಿದೆ. ದೇಶದ ಸಂಕಷ್ಟ, ಸಮಸ್ಯೆಗಳ ಬಗ್ಗೆ ವಿರೋಧ ಹಾಗೂ ಆಡಳಿತ ಪಕ್ಷ ಜೊತೆಯಾಗಿ ಸರಿಪಡಿಸುವ ಕೆಲಸ ನಡೆಯಬೇಕಿತ್ತು ಆದರೆ ವಿಪಕ್ಷ ಆ ಕೆಲಸ ಮಾಡದೆ ಕಲಾಪಕ್ಕೆ ಅಡ್ಡಿಪಡಿಸಿದೆ. ದೇಶದ ಸಾಮರಸ್ಯ, ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ನಡೆಯುವ ಸಂಸತ್ತಿನಲ್ಲಿ ದೇಶದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ. ರೈತರ ಸಮಸ್ಯೆ, ಬರಗಾಲ, ಕುಡಿಯುವ ನೀರಿನ ಕುರಿತು ಚರ್ಚೆ ನಡೆಸಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದವರು ಒಟ್ಟು ಸೇರಿ ಪರಿಹಾರ ಕಂಡುಕೊಳ್ಳಬೇಕಾದ ಸಂಸತ್ತಿನ ದಿನ ಹಾಗೂ ಗಂಟೆಗಳನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಪ್ರಜಾತಂತ್ರ ಹಾಗೂ ಜನ ವಿರೋಧಿಯಾಗಿ ವರ್ತಿಸುತ್ತಿದೆ. ಹಲವು ಮಸೂದೆಗಳು ಸಂಸತ್ತಿನಲ್ಲಿ ಬಾಕಿ ಇವೆ. ತಕ್ಷಣ ಆಗಬೇಕಾದ ಕೆಲಸಗಳು ಸಾಕಷ್ಟು ಬಾಕಿ ಇವೆ. ಈ ಕುರಿತು ಯಾವುದೇ ಚರ್ಚೆಗೆ ಕಾಂಗ್ರೆಸ್ ಅವಕಾಶ ನೀಡುತ್ತಿಲ್ಲ. ಆದುದರಿಂದ ಅಭಿವೃದ್ಧಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದು ಅವರು ಟೀಕಿಸಿದರು.ದೇಶದ ಪ್ರಧಾನಿಯ ಕರೆಯಂತೆ ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆದು ಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಖಂಡಿಸಿ ಪ್ರಧಾನಿ ಸೇರಿದಂತೆ ಕೇಂದ್ರದ ಎಲ್ಲ ಮಂತ್ರಿಗಳು, ಬಿಜೆಪಿ ಸಂಸತ್ ಸದಸ್ಯರು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ಮೂಲಕ ದೇಶದ ಜನರ ಕಣ್ಣನ್ನು ತೆರೆಸಿ ಕಾಂಗ್ರೆಸ್ ಪಕ್ಷದ ಮುಖವಾಡವನ್ನು ಜನರ ಮುಂದೆ ಬಹಿರಂಗಗೊಳಿಸಲಾಗುವುದು ಎಂದ್ರು.
ಧರಣಿಯಲ್ಲಿ ಕುಂದಾಪುರ ಮಾಜಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್. ಮೆಂಡನ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ, ಶಿವಪ್ರಸಾದ್ ಶೆಟ್ಟಿ, ಗೀತಾಂಜಲಿ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ದಿನಕರ ಬಾಬು, ಶೀಲಾ ಕೆ.ಶೆಟ್ಟಿ, ನಳಿನಿ ಪ್ರದೀಪ್ ರಾವ್, ವೀಣಾ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
