ಕಾಪು : ಚುನಾವಣೆಯಲ್ಲಿ ಗೆದ್ದು ಹುಟ್ಟೂರ ಜನತೆಯ ಸೇವೆಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ : ಗುರ್ಮೆ ಸುರೇಶ್ ಶೆಟ್ಟಿ – Vishwanews24
ಕಾಪು : ಚುನಾವಣೆಯಲ್ಲಿ ಗೆದ್ದು ಹುಟ್ಟೂರ ಜನತೆಯ ಸೇವೆಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ : ಗುರ್ಮೆ ಸುರೇಶ್ ಶೆಟ್ಟಿ
ಕಾಪು : ರಾಜಕೀಯದಿಂದ ಹಣ ಸಂಪಾದನೆ ಮಾಡಬೇಕಾಗಿಲ್ಲ. ಭಗವಂತ ನನಗೆ ಜೀವನಕ್ಕೆ ಬೇಕಾಗುವಷ್ಟನ್ನು ನೀಡಿದ್ದಾನೆ. ತಾಯಿಯ ಪ್ರೇರಣೆಯಂತೆ ಸಮಾಜದ ಸೇವೆ ಮಾಡುತ್ತಿದ್ದ ನನಗೆ ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿ, ನನ್ನ ಹುಟ್ಟೂರಿನ ಜನತೆಯ ಸೇವೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಚುನಾವಣೆಯಲ್ಲಿ ಗೆದ್ದು ಹುಟ್ಟೂರ ಜನತೆಯ ಸೇವೆಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತದಾರರಲ್ಲಿ ಮನವಿ ಮಾಡಿದರು.
ಕಾಪು ಪುರಸಭೆ ವ್ಯಾಪ್ತಿಯ ಕಾಪು ಪೇಟೆ ಸಹಿತ ವಿವಿಧೆಡೆಗಳಲ್ಲಿ ಮತಯಾಚನೆ ನಡೆಸಿ, ಕಾಪು ಪೇಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರ ಶ್ರಮಕ್ಕೆ ಋಣಿ : ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ರಾಷ್ಟ್ರ ದೊಡ್ಡದು ಎಂಬ ಶ್ರೇಷ್ಟ ಚಿಂತನೆಯೊಂದಿಗೆ ಮುನ್ನಡೆಯುತ್ತಿರುವ ಬಿಜೆಪಿ ರಾಜ್ಯದಲ್ಲಿ 72 ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದೆ. ನನ್ನನ್ನು ಗುರುತಿಸಿ ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿದೆ. ಪಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕ ಶಾಸಕರಾದಿಯಾಗಿ ಪಕ್ಷದ ಪ್ರಮುಖರು, ಕಾರ್ಯಕರ್ತರು ನಿರಂತರ ಕ್ಷೇತ್ರ ಸಂಚಾರ ನಡೆಸಿ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ನನ್ನ ಜತೆಗಿದ್ದು ಈ ಚುನಾವಣಾ ಯಜ್ಞದಲ್ಲಿ ಪಾಲ್ಗೊಳ್ಳುತ್ತಿರುವ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇನ್ನುಳಿದ ಅವಧಿಯಲ್ಲೂ ಪಕ್ಷಕ್ಕಾಗಿ ಕೆಲಸ ಮಾಡೋಣ. ಬಿಜೆಪಿಯನ್ನು ಗೆಲ್ಲಿಸೋಣ ಎಂದರು.
ಗುರ್ಮೆ ಅವರನ್ನು ಸರಕಾರದ ಭಾಗವಾಗಿಸೋಣ : ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ, ಕೇಳರಿಯದ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ನನ್ನ ಅವಧಿಯಲ್ಲಿ ಸರಕಾರದ ಮುಂದೆ ಪ್ರಸ್ತಾವಿಸಿರುವ ಹಲವು ಯೋಜನೆಗಳು ಮಂಜೂರಾತಿ ಹಂತದಲ್ಲಿವೆ. ಗುರ್ಮೆ ಸುರೇಶ್ ಶೆಟ್ಟಿ ಅವರು ನನ್ನ ಉತ್ತರಾಧಿಕಾರಿಯಾಗಿ, ನಾನು ಮತ್ತು ಕ್ಷೇತ್ರದ ಜನತೆ ಕಂಡಿರುವ ಅಭಿವೃದ್ಧಿ ಕುರಿತಾದ ಕನಸುಗಳನ್ನು ಸಾಕಾರಗೊಳಿಸಲು ಕಟಿಬದ್ಧರಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಗುರ್ಮೆ ಅವರನ್ನು ಸರಕಾರದ ಭಾಗವಾಗುವ ಅವಕಾಶ ಕಲ್ಪಿಸಿಕೊಡೋಣ ಎಂದರು.
ಬೆಳ್ತಂಗಡಿ: ಜಾತಿ-ಧರ್ಮ ನೋಡದೆ ಜನಸೇವಕನಾಗಿ ಕೆಲಸ ಮಾಡಿದ್ದೇನೆ : ಹರೀಶ್ ಪೂಂಜ – Vishwanews24
