ಕಾಪು : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಬಸ್ ನಿಲ್ದಾಣದಲ್ಲಿ ಬಸ್ಗಳ ಗುದ್ದಾಟ – vishwanews24
ಕಾಪು : ಟೈಮಿಂಗ್ಸ್ ವಿಚಾರದಲ್ಲಿ ಜಗಳ: ಎಕ್ಸ್ಪ್ರೆಸ್ ಬಸ್ ನಿಲ್ದಾಣದಲ್ಲಿ ಬಸ್ಗಳ ಗುದ್ದಾಟ
ಕಾಪು: ಎರಡು ಎಕ್ಸ್ಪ್ರೆಸ್ ಬಸ್ಸುಗಳು ಪ್ರಯಾಣಿಕರು ತುಂಬಿರುವಾಗಲೇ ಉದ್ದೇಶಪೂರ್ವಕವಾಗಿ ಪರಸ್ಪರ ಗುದ್ದಿಕೊಂಡ ಘಟನೆ ಕಾಪು ಬಸ್ಸು ನಿಲ್ದಾಣದ ಬಳಿ ನಡೆದಿದೆ.
ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಆನಂದ್ ಟ್ರಾವೆಲ್ಸ್ ಬಸ್ ಮತ್ತು ಸಂದೇಶ್ ಟ್ರಾವೆಲ್ಸ್ ಬಸ್ ನಡುವೆ ಈ ಅಪಘಾತ ನಡೆದಿದೆ.
ನಿಂತಿದ್ದ ಸಂದೇಶ್ ಬಸ್ಗೆ ಆನಂದ ಟ್ರಾವೆಲ್ಸ್ ಬಸ್ ಹಿಂದಿನಿಂದ ಗುದ್ದಿದೆ. ಬಸ್ಸಿನ ಟೈಮಿಂಗ್ಸ್ ವಿಚಾರದಲ್ಲಿ ಈ ಎರಡೂ ಬಸ್ಸುಗಳ ನಿರ್ವಾಹಕರ ನಡುವೆ ಉದ್ಯಾವರದಿಂದಲೇ ವಾಗ್ವಾದ ನಡೆದಿತ್ತು. ಸಂದೇಶ್ ಟ್ರಾವೆಲ್ಸ್ ಕಾಪು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಸಮಯದಲ್ಲಿ ಹಿಂದಿನಿಂದ ಬಂದ ಆನಂದ್ ಟ್ರಾವೆಲ್ಸ್ ಗುದ್ದಿದೆ. ಇದರಿಂದ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತು.
ಆನಂದ್ ಬಸ್ಸು ಸಂದೇಶ್ ಬಸ್ಸಿನ ಹಿಂಬದಿಗೆ ಬಲವಾಗಿ ಗುದ್ದಿದ್ದು, ಪರಿಣಾಮ ಬಸ್ಸಿನೊಳಗಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಆ ನಂತರ ಎರಡೂ ಬಸ್ಸಿನ ಚಾಲಕರು ಪರಸ್ಪರ ವಾಗ್ವಾದ ಮಾಡಿದ್ದು ಕೊಂಚ ಹೊತ್ತು ರಸ್ತೆಯಲ್ಲಿ ಹೋಗುತ್ತಿದ್ದ ಇತರ ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು ಸುಳ್ಳಲ್ಲ.
ಮಾಹಿತಿ ಪಡೆದ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಳಿಕ ಎರಡೂ ಬಸ್ಗಳನ್ನು ಠಾಣೆಗೆ ಒಯ್ದಿದ್ದಾರೆ.
