ಕಾಪು: ಮನೆ ಕಳ್ಳತನ ಪ್ರಕರಣ- ಆರೋಪಿಯ ಬಂಧನ , ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ – Vishwanews24
ಕಾಪು: ಮನೆ ಕಳ್ಳತನ ಪ್ರಕರಣ- ಆರೋಪಿಯ ಬಂಧನ , ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ
ಕಾಪು: ಉದ್ಯಾವರ ಸಮೀಪದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಕಾಪು ಪೊಲೀಸರು ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕಾಪು ಏಣಗುಡ್ಡೆ ಗ್ರಾಮದ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್(32) ಎಂದು ಗುರುತಿಸಲಾಗಿದೆ.
ಜುಲೈ 17 ರಂದು ಉದ್ಯಾವರ ನಿವಾಸಿ ಅನಿತಾ ಡಿಸಿಲ್ವಾ ರವರ ಮನೆಯಲ್ಲಿ ಮಧ್ಯಾಹ್ನ 1:00 ಗಂಟೆಯಿಂದ ಸಂಜೆ 05:00 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಮನೆಯ ಕಪಾಟಿನ ಲಾಕರ್ ನ್ನು ಮುರಿದು ಪಿರ್ಯಾದಿದಾರರು ಚಿನ್ನಾಭರಣ ಇಟ್ಟಿದ್ದ ಪೆಟ್ಟಿಗೆಯನ್ನು ಕಳವು ಮಾಡಿರುತ್ತಾರೆ. ಕಳವಾದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಒಟ್ಟು ಮೌಲ್ಯ ಅಂದಾಜು 5,50,000/- ರೂ ಆಗಿರುತ್ತದೆ ಎಂಬ ಕುರಿತು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ರಿ ಪ್ರಕರಣದಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಪುರುಷೋತ್ತಮ್, ಪಿಎಸ್ಐ (ತನಿಖೆ) ಕಾಪು ,ಮತ್ತು ಸಿಬ್ಬಂದಿಗಳಾದ ಹೆಚ್.ಸಿ. 136 ಪ್ರವೀಣ್, ಹೆಚ್.ಸಿ. 119 ರಾಜೇಶ್ ಹಾಗು ಹೆಚ್.ಸಿ. 28 ನಾರಾಯಣರವರು ಅಚ್ಚಡ ಕ್ರಾಸ್ ಬಳಿ ಡಿಯೋ ಸ್ಕೂಟರ್ನಲ್ಲಿ ಬರುತ್ತಿದ್ದ ಈ ಪ್ರಕರಣದ ಆರೋಪಿತ ಜೋನ್ ಪ್ರಜ್ವಲ್ ಫೆರ್ನಾಂಡಿಸ್ ಎಂಬಾತನನ್ನು ಆತನ ಸ್ಕೂಟರ್ ಸಹಿತ ವಶಕ್ಕೆ ಪಡೆದು ಹಾಜರುಪಡಿಸಿದವರನ್ನು ಸಿ.ಪಿ.ಐ ಕಾಪುರವರು ದಸ್ತಗಿರಿ ಮಾಡಿ , ಆರೋಪಿಯಿಂದ ಕಳವಾದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಒಟ್ಟು ವಶಪಡಿಸಿಕೊಂಡ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಹಾಗೂ ಇತರೇ ಸೊತ್ತಿನ ಒಟ್ಟು ಮೌಲ್ಯ 8,02,083/= ಆಗಬಹುದು.

ಈ ಕಾರ್ಯಾಚರಣೆಯನ್ನು ಅಕ್ಷಯ್ ಎಂ. ಹಾಕೆ, ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ಮತ್ತು ಎಸ್.ಟಿ ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ರವರ ನಿರ್ದೇಶನದಂತೆ, ಅರವಿಂದಕಲಗುಜ್ಜಿ , ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಕೆ.ಸಿ.ಪೂವಯ್ಯ, ವೃತ್ತ ನಿರೀಕ್ಷಕರು ಕಾಪು ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಪುರುಷೋತ್ತಮ್ ಪಿ.ಎಸ್.ಐ(ತನಿಖೆ), ಕಾಪು ಠಾಣೆ ,ಇವರ ಸಹಕಾರದಿಂದ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್ ಕಾಪು ವೃತ್ತ, ರಾಜೇಶ್ಪಡುಬಿದ್ರಿ ಠಾಣೆ, ನಾರಾಯಣ ಕಾಪು ಠಾಣೆರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ. ಶ್ರೀಧರ್, ಸುಧಾಕರ್ ಹಾಗೂ ಚಾಲಕರಾದ ಪ್ರಸಾದ್ ರವರು ಸಹಕರಿಸಿರುತ್ತಾರೆ.
