ಕಾಪು: ಸರ್ಕಾರದ ನಿಯಮಾವಳಿಯಂತೆ ಸಾರ್ವಜನಿಕ ಗಣೇಶೋತ್ಸವ ಆಚರಿಸಿ : ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ -Vishwanews24
ಕಾಪು: ಕೊರೊನಾ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿಯಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಿಸುವಂತೆ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.
ಕಾಪು ವೀರಭದ್ರ ಸಭಾಭವನದಲ್ಲಿ ನಡೆದ ಕಾಪು ತಾಲೂಕು ಪೊಲೀಸ್ ವೃತ್ತ ಮಟ್ಟದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದಂತೆ ಈ ಬಾರಿ ಗಣೇಶ ಚತುರ್ಥಿ ಆಚರಣೆಗೆ ಹಲವು ನಿರ್ಬಂಧ ಹೇರಿದ್ದ ರಾಜ್ಯ ಸರ್ಕಾರ ಮಂಗಳವಾರ ನಿಯಮ ಪರಿಷ್ಕರಿಸಿ ಇದೀಗ ಹೊಸ ನಿಯಮ ರೂಪಿಸಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಅನುವು ನೀಡಿದೆ. ಕೊರೊನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ಮೂರ್ತಿ ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಪ್ರತಿಷ್ಠಾಪನೆ ಮಾಡುವವರು ಎರಡು ಅಡಿ ಮೀರದಂತೆ ಮೂರ್ತಿ ಮಾಡಬೇಕು.
ಪಾರಂಪರಿಕವಾಗಿ ಗಣೇಶೋತ್ಸವ ಮಾಡುವಲ್ಲಿ ಗಣೇಶೋತ್ಸವ ಸಮಿತಿ ಅಥವಾ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್ ಕಾರ್ಪೊರೇಷನ್ ಅಥವಾ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು.
ಗಣೇಶೋತ್ಸವ ಕಾರ್ಯಕ್ರಮ ಆಯೋಜನೆ ವೇಳೆ ಯಾವುದೇ ರೀತಿಯಲ್ಲಿ ಜನರು ಗುಂಪು ಗೂಡದಂತೆ ಎಚ್ಚರಿಕೆ ವಹಿಸುವುದು ಸಮಿತಿಗಳ ಕರ್ತವ್ಯ. ಕಾನೂನು, ನಿಯಮಾವಳಿ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಗಣೇಶೋತ್ಸವ ಆಚರಣೆ ಒಂದೇ ದಿನಕ್ಕೆ ಸೀಮಿತವಾಗಿದ್ದು, ಮೆರವಣಿಗೆ ನಡೆಸದೆ ಗಣಪತಿ ವಿಸರ್ಜನೆ ನಡೆಸಬಹುದಾಗಿದೆ. ಯಾವುದೇ ರೀತಿಯಲ್ಲಿ ಸ್ಥಳೀಯಾಡಳಿತದ ಪರವಾನಿಗೆ ರಹಿತವಾಗಿ, ರಸ್ತೆ ಮಧ್ಯೆ ಗಣೇಶೋತ್ಸವ ಆಚರಣೆಗೆ ಮುಂದಾದಲ್ಲಿ ಪೊಲೀಸ್ ಆಗಮನ ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದರು.
ಕಾಪು ಠಾಣಾಧಿಕಾರಿ ರಾಜಶೇಖರ ಬಿ. ಸಾಗನೂರು, ಶಿರ್ವ ಠಾಣಾಧಿಕಾರಿ ಶ್ರೀಶೈಲ ಮುರಗೋಡ, ಪಡುಬಿದ್ರಿ ನಿಯೋಜಿತ ಠಾಣಾಧಿಕಾರಿ ವೇದಾವತಿ, ವಿವಿಧ ಪ್ರದೇಶಗಳ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
