ಕಾರ್ಯಕರ್ತರ ನೈಜ ಶ್ರಮವೇ ಪಕ್ಷದ ಗೆಲುವಿಗೆ ಆಧಾರ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್‌. ಮೆಂಡನ್‌

Featured, ಉಡುಪಿ

ಕಾಪು : ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಭಾವನೆಯನ್ನು ಹೊಂದಿರುವ ಬಿಜೆಪಿಗೆ ಕಾರ್ಯಕರ್ತರೇ ಆಸ್ತಿಗಳಾಗಿದ್ದಾರೆ. ಕಾರ್ಯಕರ್ತರ ನೈಜ ಶ್ರಮವೇ ಪಕ್ಷದ ಗೆಲುವಿಗೆ ಆಧಾರವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ / ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

ಕಾಪು ವಿಧಾನಸಭಾ ಕ್ಷೇತ್ರದ ಎಲ್ಲೂರು ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಎಲ್ಲೂರು, ಮಜೂರು, ಬೆಳಪು ಮತ್ತು ಕುತ್ಯಾರು ಪರಿಸರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮನೆ ಮನೆಗೆ ಭೇಟಿ ನೀಡಿ, ಮತಯಾಚನೆ ನಡೆಸಿ ಅವರು ಮಾತನಾಡಿದರು.

ಎಲ್ಲೂರು ಜಿ.ಪಂ. ಕ್ಷೇತ್ರದ ಮಜೂರು, ಎಲ್ಲೂರು, ಕುತ್ಯಾರು ಸಹಿತ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಅಧಿಕಾರದಲ್ಲಿದೆ. ಇಲ್ಲಿನ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಸದಸ್ಯರುಗಳೂ ಬಿಜೆಪಿಗರೇ ಆಗಿದ್ದು, ಈ ಭಾಗದಲ್ಲಿ ಸಮರ್ಥ ಆಡಳಿತದೊಂದಿಗೆ ಅಭಿವೃದ್ಧಿಗೆ ಪೂರಕವಾಗಿ ಅನುದಾನ ಬಿಡುಗಡೆಗೊಳಿಸಲು ಬಿಜೆಪಿಯಿಂದ ಮಾತ್ರಾ ಸಾಧ್ಯವಿದೆ ಎಂದರು.

ಕಾಂಗ್ರೆಸ್‌ ಪಕ್ಷ ಕೇವಲ ನಗರಾಡಳಿತ ವ್ಯವಸ್ಥೆಯತ್ತ ಮಾತ್ರಾ ದೃಷ್ಟಿ ಹರಿಸುತ್ತಿದ್ದು, ಬಿಜೆಪಿಯಿಂದ ಮಾತ್ರಾ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯವಿದೆ. ಅದನ್ನು ಮತದಾರರು ಕೂಡಾ ಅರಿತುಕೊಂಡಿದ್ದು, ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.

ಬಿಜೆಪಿ ಕ್ಷೇತ್ರಾಧ್‌ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್‌ ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯರಾದ ಶಶಿಪ್ರಭಾ ಶೆಟ್ಟಿ, ಕೇಶವ ಮೊಯ್ಲಿ, ಎಲ್ಲೂರು ಗ್ರಾ.ಪಂ. ಅಧ್ಯಕ್ಷ ವಸಂತಿ ಮಧ್ವರಾಜ್‌, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಧೀರಜ್‌ ಶೆಟ್ಟಿ, ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್‌ ರಾವ್‌, ಬಿಜೆಪಿ ಚುನಾವಣಾ ಏಜಂಟ್‌ ಗಂಗಾಧರ ಸುವರ್ಣ, ಎಸ್‌ಸಿ/ಎಸ್ಟಿ ಮೋರ್ಚಾ ಅಧ್ಯಕ್ಷ ಚಂದ್ರ ಮಲ್ಲಾರು ಮೊದಲಾದವರು ಉಪಸ್ಥಿತರಿದ್ದರು.