ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಾಣ : ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ – Vishwanews24
ಡೆಹ್ರಾಡೂನ್: ‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಹೇಳಿದ್ದಾರೆ.
“ಬಿಜೆಪಿ ಮಿತಿ ಮೀರಿ ವರ್ತಿಸುತ್ತಿದೆ. ಯಾರು ಕಾನೂನನ್ನು ಮುರಿಯುತ್ತಾರೋ ಅವರು ಮರ್ಯಾದಾ ಪುರುಷೋತ್ತಮ ರಾಮನ ಭಕ್ತನಾಗಲು ಸಾಧ್ಯವಿಲ್ಲ. ನಾವು ಕಾನೂನಿಗೆ ಗೌರವ ನೀಡುತ್ತೇವೆ. ಕಾಂಗ್ರೆಸ್ ಅಧಿಕಾರ ಬಂದಮೇಲೆ ರಾಮ ಮಂದಿರ ನಿರ್ಮಾಣವಾಗಲಿದೆ,” ಎಂದು ಹೇಳುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಮಾತ್ರ ಅರ್ಹ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ರಾವತ್, ‘ವಿರೋಧ ಪಕ್ಷಗಳನ್ನು ಅಧಿಕಾರದಿಂದ ಹೇಗಾದರೂ ಮಾಡಿ ಕೆಳಗಿಸುವುದು ಬಿಜೆಪಿ ಉದ್ದೇಶ. ಅದಕ್ಕಾಗಿ, ಹಣ ದುರ್ಬಳಕೆ, ತೋಳ್ಬಲದ ಜತೆಗೆ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆಗಳಂತ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.
2025ರ ಒಳಗೆ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂದು ಆರ್ಎಸ್ಎಸ್ನ ಎರಡನೇ ಮುಖ್ಯಸ್ಥ ಭಯ್ಯಾಜಿ ಜೋಶಿ ಶುಕ್ರವಾರ ಹೇಳಿಕೊಂಡಿದ್ದರು. ಅಲ್ಲದೆ, ಈ ಕ್ರಮದಿಂದ ದೇಶಕ್ಕೆ ಮುಂದಿನ 150 ವರ್ಷ ಒಳ್ಳೆಯದಾಗುತ್ತದೆ ಎಂದು ಹೇಳಿಕೊಂಡಿದ್ದರು. “1952ರಲ್ಲಿ ಸೋಮನಾಥ ದೇವಾಲಯ ನಿರ್ಮಾಣ ಮಾಡಲಾಯಿತು. ಅದಾದ ನಂತರ ದೇಶ ಅಭಿವೃದ್ಧಿ ವೇಗ ಪಡೆದುಕೊಂಡಿತ್ತು. 2025ರಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ನಂತರ ದೇಶಕ್ಕೆ ಒಳಿತಾಗಲಿದೆ. ನಂತರ 150 ವರ್ಷಗಳ ಕಾಲ ದೇಶಕ್ಕೆ ಯಾವುದೇ ಕೇಡು ಎದುರಾಗದು,” ಎಂದಿದ್ದರು ಭಯ್ಯಾಜಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹರೀಶ್ ರಾವತ್ ಈ ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿರುವ ಕುತಂತ್ರಕ್ಕೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ. ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟ ಕರ್ನಾಟಕದಲ್ಲಿ 27 ಲೋಕಸಭೆ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದರು.
