ಕೊಂಕಣ ರೈಲ್ವೆ: ಬೈಂದೂರಿನಲ್ಲಿ ಕ್ರಾಸಿಂಗ್ ಸ್ಟೇಶನ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

Featured, ಉಡುಪಿ

ಕೊಂಕಣ ರೈಲ್ವೆ: ಬೈಂದೂರಿನಲ್ಲಿ ಕ್ರಾಸಿಂಗ್ ಸ್ಟೇಶನ್ ನಿರ್ಮಾಣಕ್ಕೆ ಪ್ರಸ್ತಾವನೆ

ಉಡುಪಿ : ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳನ್ನು -ಉತ್ತರ ಕನ್ನಡ, ಉಡುಪಿ ಮತ್ತು ಕಾರವಾರ- ಹಾದುಹೋಗುವ ಕೊಂಕಣ ರೈಲ್ವೆಯ 251.76 ಮಾರ್ಗದಲ್ಲಿ ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿ.(ಆರ್‌ಸಿಎಲ್) 2025-26ನೇ ಸಾಲಿನಲ್ಲಿ 8.69 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನೂ 8.72 ಕೋಟಿ ರೂ. ವೆಚ್ಚದ ಕಾಮಗಾರಿ ವಿವಿಧ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ನಿಗಮ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಲ್ಲದೇ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮೂಕಾಂಬಿಕಾ ರೋಡ್ ಬೈಂದೂರು ನಿಲ್ದಾಣದಲ್ಲಿ ಹೊಸದಾಗಿ ಕ್ರಾಸಿಂಗ್ ಸ್ಟೇಶನ್‌ನ ನಿರ್ಮಾಣದ ಪ್ರಸ್ತಾಪವನ್ನು ರೂಪಿಸಲಾಗಿದೆ. ಸದ್ಯ ಇದು ರೈಲುಗಳ ನಿಲುಗಡೆಯ ನಿಲ್ದಾಣ ಆಗಿ ಕಾರ್ಯನಿರ್ವಹಿಸುತ್ತಿದೆ.

ರಾಜ್ಯದ ಪ್ರಮುಖ ತೀರ್ಥಯಾತ್ರಾ ಸ್ಥಳವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇಂದು ಅತೀ ಸಮೀಪದ ರೈಲು ನಿಲ್ದಾಣವಾಗಿದೆ. ಹೀಗಾಗಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಹೆಚ್ಚುಕಮ್ಮಿ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳು ಇಲ್ಲಿ ನಿಲುಗಡೆಯನ್ನು ಹೊಂದಿವೆ. ಬೈಂದೂರನ್ನು ಕ್ರಾಸಿಂಗ್ ಸ್ಟೇಶನ್ ಆಗಿ ಅಭಿವೃದ್ಧಿ ಪಡಿಸುವುದರಿಂದ ಇನ್ನಷ್ಟು ರೈಲುಗಳು ಇಲ್ಲಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ನಿಗಮ ಹೇಳಿದೆ.

ರಾಜ್ಯ ಕರಾವಳಿಯ ಉತ್ತರ ಕನ್ನಡದ ಅಸ್ನೋಟಿಯಿಂದ ಮಂಗಳೂರಿನ ತೋಕೂರುವರೆಗಿನ 251.76ಕಿ.ಮೀ. ರೈಲು ಮಾರ್ಗದಲ್ಲಿ ಈಗಾಗಲೇ ಹಲವು ಕಾಮಗಾರಿಗಳನ್ನು ಈ ವರ್ಷ ಪೂರ್ಣಗೊಳಿಸಲಾಗಿದ್ದು, ಇನ್ನಷ್ಟು ಕಾಮಗಾರಿ ನಡೆಯುತ್ತಿದೆ. ಪಶ್ಚಿಮ ಘಟ್ಟದ ಉದ್ದಕ್ಕೂ ತಪ್ಪಲಿನಲ್ಲಿ ಸಾಗುವಂತೆ ಇರುವ ಈ ರೈಲು ಮಾರ್ಗದಲ್ಲಿ 23 ಕ್ರಾಸಿಂಗ್ ಸ್ಟೇಶನ್‌ಗಳು ಎರಡು ಎರಡು ನಿಲುಗಡೆ ಸ್ಟೇಶನ್‌ಗಳು, 11ಕಿ.ಮೀ. ಉದ್ದದ 13 ಸುರಂಗಗಳು, 50 ಪ್ರಮುಖ ಸೇತುವೆಗಳು, 42 ಲೆವೆಲ್ ಕ್ರಾಸಿಂಗ್‌ಗಳು, 140 ರೋಡ್ ಓವರ್ ಮತ್ತು ಅಂಡರ್ ಬ್ರಿಜ್‌ಗಳು, 17 ಫುಟ್‌ಓವರ್ ಬ್ರಿಜ್‌ಗಳಿವೆ.

2025-26ನೇ ಸಾಲಿನಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹಾಗೂ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಗಳನ್ನು ಉನ್ನತೀಕರಿಸಲು ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇವುಗಳಲ್ಲಿ ಕುಮಟಾದಲ್ಲಿ ನಿರ್ಮಾಣ ಗೊಂಡ ಉನ್ನತ ಮಟ್ಟದ ಪ್ಲಾಟ್‌ಫಾರಂ, ಭಟ್ಕಳ ನಿಲ್ದಾಣದ ಪ್ಲಾಟ್‌ಫಾರಂನ ವಿಸ್ತರಣೆ, ಗೋಕರ್ಣದಲ್ಲಿ ಪ್ಲಾಟ್‌ಫಾರಂ ಅಭಿವೃದ್ಧಿ, ಕಾರವಾರ, ಮುರ್ಡೇಶ್ವರ, ಉಡುಪಿಗಳಲ್ಲಿ ಹೊಸ ನಾಮಫಲಕ, ಉಡುಪಿ, ಮುಲ್ಕಿ, ಸುರತ್ಕಲ್ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂಗಳ ಮೇಲ್ಚಾವಣಿ ಹಾಗೂ ತಂಗುದಾಣಗಳ ಅಭಿವೃದ್ಧಿಗೊಳಿಸಲಾಗಿದೆ.

ಅಲ್ಲದೇ ಉಡುಪಿ ಮತ್ತು ಮುರ್ಡೇಶ್ವರಗಳಲ್ಲಿ ಹೊಸ ಶೌಚಾಲಯಗಳ ಬ್ಲಾಕ್‌ಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹಕ್ಕಾಗಿ ಉಡುಪಿಯಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ (ಒಎಸ್‌ಒಪಿ) ಕಿಯೋಸ್ಕ್‌ನ್ನು ಪ್ರಾರಂಭಿಸಲಾಗಿದೆ.

ಇದರೊಂದಿಗೆ 8.72 ಕೋಟಿ ರೂ. ಮೊತ್ತದ ಕಾಮಗಾರಿ ಅನುಷ್ಠಾನ ಹಂತದಲ್ಲಿದೆ. ಇವುಗಳಲ್ಲಿ ಉಡುಪಿಯಲ್ಲಿ ಎಕ್ಸಿಕ್ಯೂಟಿವ್ ಲಾಂಜ್‌ನ ವಿಸ್ತರಣೆ, ಮುಲ್ಕಿಯಲ್ಲಿ ಉನ್ನತ ಮಟ್ಟದ ಪ್ಲಾಟ್‌ಫಾರಂ ರಚನೆ, ಪಡುಬಿದ್ರಿಯಲ್ಲಿ ಪ್ಲಾಟ್‌ಫಾರಂನ ವಿಸ್ತರಣೆ ಹಾಗೂ ಉಡುಪಿಯಲ್ಲಿ ಹೊಸದಾಗಿ ಮೂರು ಲಿಫ್ಟ್‌ಗಳ ಅಳವಡಿಕೆ, ಗೋಕರ್ಣದಲ್ಲಿ ಫುಟ್‌ಓವರ್ ಬ್ರಿಜ್ ನಿರ್ಮಾಣ ಸೇರಿವೆ ಎಂದು ನಿಗಮದ ಹೇಳಿಕೆ ತಿಳಿಸಿದೆ.

ಇನ್ನು 2026-27ನೇ ಸಾಲಿನ ಬಜೆಟ್‌ನಲ್ಲಿ 4.52 ಕೋಟಿ ರೂ.ಗಳನ್ನು ಪ್ರಯಾಣಿಕರಿಗೆ ವಿವಿಧ ಸೌಲಭ್ಯಗಳ ಒದಗಿಸಲು ಮಂಜೂರು ಮಾಡಲಾಗಿದೆ. ಇವುಗಳಲ್ಲಿ ಬಾರಕೂರು ನಿಲ್ದಾಣದಲ್ಲಿ ಉನ್ನತ ಮಟ್ಟದ ಪ್ಲಾಟ್‌ಫಾರಂ ರಚನೆ, ಮುಲ್ಕಿ ನಿಲ್ದಾಣದಲ್ಲಿ ಹೊಸ ಫುಟ್‌ಓವರ್ ಬ್ರಿಜ್ ನಿರ್ಮಾಣ, ಮಿರ್ಜಾನಾ ಮತ್ತು ಬಿಜೂರು ನಿಲ್ದಾಣಗಳಲ್ಲಿ ತಂಗುದಾಣಗಳ ರಚನೆಯೊಂದಿಗೆ ವಿವಿಧ ನಿಲ್ದಾಣಗಳಲ್ಲಿ ಶೌಚಾಲಯ ಸೌಲಭ್ಯಗಳ ಸುಧಾರಣೆಯೂ ಸೇರಿವೆ.

22.80 ಕೋಟಿ ರೂ. ಯೋಜನೆ: ಕೊಂಕಣ ರೈಲ್ವೆಯು ಮುಂದಿನ ಐದು ವರ್ಷಗಳ ಅವಧಿಗೆ 22.80 ಕೋಟಿ ರೂ.ಗಳ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಸ್ತಾಪವನ್ನು ಹಾಕಿಕೊಂಡಿದೆ. ಇವುಗಳಲ್ಲಿ ಉಡುಪಿ, ಸುರತ್ಕಲ್ ಹಾಗೂ ಮಂಕಿ ನಿಲ್ದಾಣಗಳ ಪ್ಲಾಟ್‌ಫಾರಂಗಳಿಗೆ ಮೇಲ್ಚಾವಣಿ (ರೂಫಿಂಗ್) ನಿರ್ಮಾಣ ಸೇರಿದೆ. ಹೊನ್ನಾವರ ಮತ್ತು ಗೋಕರ್ಣ ರೋಡ್ ನಿಲ್ದಾಣಗಳ ಪ್ಲಾಟ್‌ಫಾರಂಗಳನ್ನು ಉನ್ನತ ಮಟ್ಟದ ಪ್ಲಾಟ್‌ಫಾರಂ ಆಗಿ ಅಭಿವೃದ್ಧಿ, ಹೊನ್ನಾವರ ದಲ್ಲಿ ಫುಟ್‌ಓವರ್ ಬ್ರಿಜ್ ನಿರ್ಮಾಣ, ಉಡುಪಿ, ಕುಂದಾಪುರಗಳಲ್ಲಿ ಬಯೋಟಾಯ್ಲೆಟ್ ನಿರ್ಮ್‌ಣ, ಕುಮಟ ಮತ್ತು ಗೋಕರ್ಣ ರೋಡ್‌ಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ ಸೇರಿವೆ.

ಕೊಂಕಣ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣದ ಅತ್ಯುನ್ನತ ಅನುಭವ ನೀಡಲು ಕಾರವಾರ, ಉಡುಪಿ ಮತ್ತು ಮೂಕಾಂಬಿಕಾ ರೋಡ್ ಬೈಂದೂರು ನಿಲ್ದಾಣಗಳಲ್ಲಿ ಎಕ್ಸಿಕ್ಯೂಟಿವ್ ಲಾಂಜ್, ಉಡುಪಿ, ಬೈಂದೂರು ಹಾಗೂ ಕಾರವಾರ ನಿಲ್ದಾಣಗಳಲ್ಲಿ ರೆಸ್ಟೋರೆಂಟ್‌ಗಳ ನಿರ್ಮಾಣವೂ ಸೇರಿವೆ ಎಂದು ಕೆಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.

ಕರಾವಳಿಯ ರೈಲು ಪ್ರಯಾಣಿಕರಿಗೆ ಕಳೆದ ಮೂರು ವರ್ಷಗಳಲ್ಲಿ ಮೂರು ಹೊಸ ರೈಲು ಸಂಪರ್ಕಗಳನ್ನು ನೀಡಲಾ ಗಿದೆ. ಇವುಗಳಲ್ಲಿ ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್- ಮುರ್ಡೇಶ್ವರ ನಡುವೆ ಎಕ್ಸ್‌ಪ್ರೆಸ್ (2023ರ ಸೆ.16ರಿಂದ), ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವೆ ವಂದೇಭಾರತ್ ಎಕ್ಸ್‌ಪ್ರೆಸ್(2023ರ ಡಿ.30) ಹಾಗೂ ಕಾಚಿಗುಡ- ಮುರ್ಡೇಶ್ವರ- ಕಾಚಿಗುಡ ಎಕ್ಸ್‌ಪ್ರೆಸ್‌ನ್ನು ಮಂಗಳೂರು ಸೆಂಟ್ರಲ್- ಮುರ್ಡೇಶ್ವರಕ್ಕೆ 2024ರ ಅ.11ರಿಂದ) ವಿಸ್ತರಣೆ ಸೇರಿವೆ.ಅಲ್ಲದೇ ಹಲವು ಹೊಸರಾಜ್ಯದ ರೈಲುಗಳಿಗೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Leave a Reply