ಕೊಪ್ಪಳ: ಮುಖ್ಯ ಶಿಕ್ಷಕನ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆ 24 ವಿದ್ಯಾರ್ಥಿಗಳಿಗೆ ವಿಮಾನಯಾನ – vishwanews24
ಕೊಪ್ಪಳ: ಮುಖ್ಯ ಶಿಕ್ಷಕನ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆ 24 ವಿದ್ಯಾರ್ಥಿಗಳಿಗೆ ವಿಮಾನಯಾನ
ಕೊಪ್ಪಳ: ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿ ಗಮನ ಸೆಳೆದಿದ್ದಾರೆ.
ತಾಲೂಕಿನ ಬಹದ್ದೂರ್ ಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ ಅವರು 5, 6, 7, 8ನೇ ತರಗತಿಯ 220 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದರು. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿ ತರಗತಿಯ 6 ವಿದ್ಯಾರ್ಥಿಗಳನ್ನು ಜಿಂದಾಲ್ನಿಂದ ಬೆಂಗಳೂರಿಗೆ ವಿಮಾನ ಪ್ರವಾಸ ಮಾಡಿಸುವ ಯೋಜನೆಯನ್ನು ಹಾಕಿಕೊಂಡಿದ್ದರು.
ಕ್ರಿಸ್ಮಸ್ ವೇಳೆ ದೇಶದಲ್ಲಿ ಕ್ರೈಸ್ತರ ಮೇಲಿನ ದಾಳಿಗೆ ಉಡುಪಿ ಧರ್ಮಪ್ರಾಂತ್ಯ ಖಂಡನೆ – vishwanews24
ಅದರಂತೆ 24 ವಿದ್ಯಾರ್ಥಿಗಳ ಜತೆಗೆ ಶಾಲೆ ಸಹ ಶಿಕ್ಷಕರು ಹಾಗೂ ಬಿಸಿಯೂಟ ಸಿಬ್ಬಂದಿ, ಎಸ್ಡಿಎಂಸಿ ಪದಾಧಿಕಾರಿಗಳು ಸೇರಿ ಒಟ್ಟು 40 ಮಂದಿ ಶುಕ್ರವಾರ ಕೊಪ್ಪಳದಿಂದ ಬಳ್ಳಾರಿ ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ತೆರಳಿದರು. ವಿದ್ಯಾರ್ಥಿಗಳ 2 ದಿನದ ಪ್ರಯಾಣದ ವೆಚ್ಚ 5ಲಕ್ಷ ರೂ. ಅನ್ನು ಬೀರಪ್ಪ ಅಂಡಗಿ ಅವರೇ ಭರಿಸಿದ್ದಾರೆ. ವಿಧಾನಸೌಧ, ತಾರಾಲಯ ಮುಖ್ಯಮಂತ್ರಿಗಳ ಕೊಠಡಿ ಸೇರಿ ವಿಮಾನದಲ್ಲಿ ಪ್ರಯಾಣಿಸುವಂತಹ ಸೌಭಾಗ್ಯ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಬೇಕು ಎನ್ನುವುದು ನಮ್ಮ ಕನಸಾಗಿತ್ತು. ಮಕ್ಕಳಿಗೆ ವಿಧಾನ ಸೌಧದ ಒಳಾಂಗಣ, ಸಿಎಂ ಕೊಠಡಿ ಸೇರಿ ವಿವಿಧ ಸ್ಥಳ ತೋರಿಸಿದ್ದೇವೆ. ಎಲ್ಲ ವೆಚ್ಚ ನಾವೇ ಭರಿಸಿದ್ದು, ಅವರ ಕನಸು ನನಸು ಮಾಡಿದ್ದೇವೆ.
– ಬೀರಪ್ಪ ಅಂಡಗಿ, ಬಹದ್ದೂರ್ ಬಂಡಿ ಶಾಲೆ ಮುಖ್ಯ ಶಿಕ್ಷಕ
