ಕೊರೊನಾ ತಡೆಗೆ ಮೋದಿಯವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿಲ್ಲ , ಬರೇ ಭಾಷಣ ಮಾಡುವುದರಿಂದ ಕೊರೋನಾ ಸಮಸ್ಯೆ ಸ್ಥಗಿತಗೊಳ್ಳುವುದಿಲ್ಲ : ಸಿದ್ದರಾಮಯ್ಯ -Vishwanews24
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನತಾ ಕರ್ಫ್ಯೂ ಕರೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ಟೀಕಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಜನ ಮನೆಯಲ್ಲೇ ಇದ್ದಾರೆ. ಈ ರೀತಿಯ ಕರ್ಫ್ಯೂ ಈಗಾಗಲೇ ರಾಜ್ಯದಲ್ಲಿ ಜಾರಿ ಇದೆ. ಇದನ್ನೇ ಮೋದಿಯವರು ವಿಶೇಷವಾಗಿ ಹೇಳುವುದೇನು ಇಲ್ಲ. ಈ ಬಗ್ಗೆ ಜನರಿಗೆ ಈಗಾಗಲೇ ಗೊತ್ತಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿಯವರು ಕೇವಲ ಭಾಷಣ ಮಾಡಿದ್ದಾರೆ. ಅವರ ಭಾಷಣದಲ್ಲಿ ಏನೇನೂ ಸತ್ವ ಇಲ್ಲ. ಕೊರೊನಾ ತಡೆಗೆ ಮೋದಿಯವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿಲ್ಲ. ಪರಿಹಾರ ಏನೂ ಸೂಚಿಸಿಲ್ಲ. ಕೇಂದ್ರದಿಂದ ಕೈಗೊಳ್ಳುವ ತುರ್ತು ಕ್ರಮಗಳ ಕುರಿತು ಬೆಳಕು ಚೆಲ್ಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬೇರೆ ದೇಶಗಳು ಕೊರೋನಾ ತಡೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ. ಆದರೆ ಕೇಂದ್ರ ಸರ್ಕಾರ ಯಾವುದೇ ಪ್ಯಾಕೇಜ್ ಕೊಟ್ಟಿಲ್ಲ. ಬರೇ ಭಾಷಣ ಮಾಡುವುದರಿಂದ ಕೊರೋನಾ ಸಮಸ್ಯೆ ಸ್ಥಗಿತಗೊಳ್ಳುವುದಿಲ್ಲ ಎಂದು ಟೀಕಿಸಿದರು.
