ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್‌ ಕುಮಾರ್‌ ನ್ಯಾಯಾಂಗ ಬಂಧನ ಜೂನ್ 25 ರವರೆಗೆ ವಿಸ್ತರಣೆ – vishwanews24

Featured, ರಾಷ್ಟ್ರ ನ್ಯೂಸ್

ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್‌ ಕುಮಾರ್‌ ನ್ಯಾಯಾಂಗ ಬಂಧನ ಜೂನ್ 25 ರವರೆಗೆ ವಿಸ್ತರಣೆ – vishwanews24

ನವದೆಹಲಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಸುಶೀಲ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಜೂನ್ 25 ರವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಜೈಲಿನಲ್ಲಿ ವಿಶೇಷ ಆಹಾರ ಮತ್ತು ಪೂರಕ ಸಾಮಗ್ರಿಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಬುಧವಾರ ವಜಾಗೊಳಿಸಿತ್ತು. ಅವುಗಳು ‘ಅವಶ್ಯ’ವಾದುದಲ್ಲ ಎಂದು ಕೋರ್ಟ್ ಹೇಳಿತ್ತು.

ಕುಸ್ತಿಪಟು ಸಾಗರ್‌ ರಾಣಾ(23) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್‌ ಕುಮಾರ್‌ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಛತ್ರಸಾಲ್‌ ಕ್ರೀಡಾಂಗಣದಲ್ಲಿ ಮೇ 4ರ ತಡರಾತ್ರಿ ಕುಸ್ತಿಪಟು ಸಾಗರ್‌ ರಾಣಾ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಸಾಗರ್‌ ಮೃತಪಟ್ಟರು. ಮಾಡೆಲ್‌ ಟೌನ್‌ ಪ್ರದೇಶದಲ್ಲಿ ಆಸ್ತಿ ವಿಚಾರಕ್ಕಾಗಿ ಸುಶೀಲ್‌ ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಶೀಲ್ ಮತ್ತು ಅವರ ಸ್ನೇಹಿತ ಅಜಯ್‌ ಅವರನ್ನು ಇತ್ತೀಚಿಗೆ ದೆಹಲಿ ಹೊರವಲಯದ ಮುಂಡ್ಕಾ ಪ್ರದೇಶದಲ್ಲಿ ದೆಹಲಿ ಪೊಲೀಸ್‌ ವಿಶೇಷ ಪಡೆ ಬಂಧಿಸಿತ್ತು.