ಜಗತ್ತಿನಲ್ಲಿ ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ; ಬಿ.ಎಸ್‌.ಯಡಿಯೂರಪ್ಪ

Featured, ರಾಜ್ಯ ನ್ಯೂಸ್

ಹಾವೇರಿ: “ಮುಂದಿನ 42 ದಿನಗಳಲ್ಲಿ ಮನೆಗೆ ಹೋಗುವ ಸಿದ್ದರಾಮಯ್ಯ ಬಗ್ಗೆ ನಾನು ಟೀಕೆ ಮಾಡುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಾಲೂಕಿನ ಕಾಗಿನೆಲೆಯಲ್ಲಿ ನಡೆದ ಬಿಜೆಪಿಯ ಹಿಂದುಳಿದ ವರ್ಗಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿ, “ಸಿದ್ದರಾಮಯ್ಯನವರಿಗೆ ಹಣಕಾಸು ಸಚಿವರಾಗಿದ್ದಾಗ ಕಾಗಿನೆಲೆ, ಕನಕದಾಸರ ನೆನಪು ಆಗಿರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕೋಟ್ಯಂತರ ರೂ.ಅನುದಾನ ಕೊಟ್ಟಿದ್ದೆನೆ. ಜಗತ್ತಿನಲ್ಲಿ ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ಎಂದರು. “ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾನು ಮುಖ್ಯಮಂತ್ರಿ ಆದ ಮೇಲೆ ಹಿಂದುಳಿದವರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕೇಂದ್ರದಿಂದ ದೊಡ್ಡ ಆರ್ಥಿಕ ನೆರವು ತಂದು ಅಭಿವೃದ್ಧಿ ಮಾಡುತ್ತೇನೆ. ನೀರಾವರಿಗೆ ಲಕ್ಷ ಕೋಟಿ ರೂ. ಅನುದಾನ ಮೀಸಲಿಟ್ಟು ರೈತರ ಭೂಮಿಗೆ ನೀರು ಹರಿಸುವುದಾಗಿ ಹೇಳಿದರು. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.

ಸಿದ್ದರಾಮಯ್ಯಗೆ ಇದು ಕೊನೇ ಚುನಾವಣೆ: ಕೆ.ಎಸ್‌. ಈಶ್ವರಪ್ಪ
ಹಾವೇರಿ: ಸಿದ್ದರಾಮಯ್ಯ ಅವರೇ ಹೇಳುವಂತೆ ಇದು ಅವರ ಕೊನೆಯ ಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ವಿಧಾನಸಭೆಯಿಂದ ಔಟ್‌ (ಹೊರಗೆ). ಬಿಜೆಪಿ ಇನ್‌ (ಒಳಗೆ) ಆಗಲಿದೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು. ಮಂಗಳವಾರ ಕಾಗಿನೆಲೆಯಲ್ಲಿ ನಡೆದ ಬಿಜೆಪಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿ, ಸಿದ್ದರಾಮಯ್ಯ ಚುನಾವಣಾ ಚಾಣಕ್ಯ ಅಮಿತ್‌ ಶಾ ಬಗ್ಗೆ ಟೀಕೆ ಮಾಡುತ್ತಾರೆ. ಅವರು ತಮ್ಮ ಕೊನೆಯ ಟೀಕೆ ಮಾಡಿ ಮನೆಗೆ ಹೋಗಲಿ. ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲುವುದೇ ಇಲ್ಲ. ಅವರನ್ನು ಸಿಎಂ ಮಾಡುತ್ತೇನೆಂದು ರಾಹುಲ್ ಗಾಂಧಿಯೂ ಹೇಳಿಲ್ಲ. ಸೋನಿಯಾ ಗಾಂಧಿಯೂ ಹೇಳಿಲ್ಲ. ಇನ್ನು ಪಕ್ಷದ ರಾಜ್ಯಾಧ್ಯಕ್ಷರ ಒಪ್ಪಿಗೆ ಕೂಡ ಇಲ್ಲ .ಮೇ 12ಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ 22ನೇ ರಾಜ್ಯವಾಗಿ ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದರು.