ಜಾತಿ, ಧರ್ಮವನ್ನು ಮರೆತು ಹಿಂದೂ ಯುವತಿಯ ವಿವಾಹಕ್ಕೆ ನೆರವಾದ ಮುಸ್ಲಿಂ ಬಾಂಧವರು – Vishwanews24
ಉಪ್ಪಿನಂಗಡಿ: ತೀರಾ ಬಡ ಕುಟುಂಬದ ಹಿಂದೂ ಧರ್ಮದ ಯುವತಿಯ ಮದುವೆಯೊಂದನ್ನು ನೆರೆಯ ಮುಸ್ಲಿಂಮರೇ ಮುಂದೆ ನಿಂತು ಮಾಡುವ ಮೂಲಕ ಸೌಹಾರ್ದತೆ ಮೆರೆದ ಘಟನೆ ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ಸೋಮವಾರ ನಡೆದಿದೆ.
ಮಾನವೀಯತೆಯ ನಂಟಿನಿಂದ ಹುಡುಗಿಯ ಪರವಾಗಿ ಹುಡುಗನ ಮನೆಯವರನ್ನು ಮಾತನಾಡಿಸಿ ಮದುವೆಗೆ ದಿನ ನಿಗದಿ ಪಡಿಸಿದರು. ಈ ಸಂದರ್ಭ ಅವರೊಂದಿಗೆ ಯುವತಿಯ ಕೆಲ ಬಂಧುಗಳು ಕೂಡಿಕೊಂಡರು. ಅಕ್ಕ ಪಕ್ಕದ ಮನೆಗಳಿಂದ ಸೋಗೆಯನ್ನು ತಂದು ಚಪ್ಪರ ಹಾಕಿದರು.
ಲತೀಫ್ ಎಂಬವರ ಮನೆಯಲ್ಲಿ ಮದುಮಗಳನ್ನು ಶೃಂಗರಿಸಿ ಹಿಂದೂ ಸಂಪ್ರದಾಯದಂತೆ ವಿವಾಹ ಶಾಸ್ತ್ರವನ್ನು ನೆರವೇರಿಸಿದರು. ಮದುವೆಯ ಅಂಗವಾಗಿ 150 ಮಂದಿಗೆ ಮಾಂಸದೂಟವನ್ನೂ ಸಿದ್ಧಪಡಿಸಿ ಉಣಬಡಿಸಿದರು.ಮಾಂಗಲ್ಯ ಸೂತ್ರ, ಮದುಮಗಳ 2 ಜತೆ ವಸ್ತ್ರವನ್ನೊಳಗೊಂಡಂತೆ ಎಲ್ಲಾ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಲತೀಫ್, ನಿಹಾ ಡ್ರೆಸ್ಸಸ್ ನ ಮಾಲೀಕ ಕೆ.ಅಬೂಬಕ್ಕರ್, ಶಮೀರ್, ಪುತ್ತುಮೋನು ಮತ್ತಿತರರು ಭರಿಸಿ ಮಾನವೀಯತೆ ಮೆರೆದರು.
ಜಾತಿ, ಧರ್ಮ ಮರೆತು ಹೆಣ್ಣುಮಗಳ ಬಾಳಿಗೆ ಬೆಳಕಾಗುವ ಮೂಲಕ ಈ ಮುಸ್ಲಿಂ ಬಾಂಧವರ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
