ಜಾತ್ಯತೀತ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗಿದೆ : ಓವೈಸಿ ಆರೋಪ -Vishwanews24

Featured, ರಾಷ್ಟ್ರ ನ್ಯೂಸ್

ಜಾತ್ಯತೀತ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗಿದೆ : ಓವೈಸಿ ಆರೋಪ -Vishwanews24

ನವದೆಹಲಿ: ದೇಶದ ಅಭಿವೃದ್ಧಿ ಮಾಡುವಲ್ಲಿ ಮುಸ್ಲಿಮ್ ಮುಖಂಡರ ನಾಯಕತ್ವ ರಾಜಕೀಯ ಪಕ್ಷಗಳಿಗೆ ಬೇಕಾಗಿಲ್ಲ. ಪ್ರತಿಯೊಬ್ಬರು ಅವರವರ ಪಾಲಿನ ಹಕ್ಕನ್ನು ಪಡೆಯುತ್ತಾರೆ, ಆದರೆ ಉತ್ತರ ಪ್ರದೇಶದಲ್ಲಿ ಮುಸ್ಲಿಮರಿಗೆ ಏನೂ ಸಿಗುತ್ತಿಲ್ಲ. ಕೇವಲ ಜಾತ್ಯತೀತ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

ಓವೈಸಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ಮುಸ್ಲಿಂ ಬಾಹುಳ್ಯದ ರುಡೌಲಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

ಮುಸ್ಲಿಮರು ಯಾರ ನೆರಳಿನಲ್ಲಿ ಬದುಕಬೇಕಾಗಿಲ್ಲ ಎಂದು ಅಸಾದುದ್ದೀನ್, ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಯಾವಾಗಲೂ ಮುಸ್ಲಿಮ್ ಸಮುದಾಯವನ್ನು ಭಯದಲ್ಲಿಯೇ ಇರಿಸಿರುವುದಾಗಿ ಆರೋಪಿಸಿರುವುದಾಗಿ ವರದಿ ತಿಳಿಸಿದೆ.

ಇಲ್ಲಿ ಶೇ.90ರಷ್ಟು ಮುಸ್ಲಿಮರ ಮತಗಳಿವೆ, ಕೇವಲ ಶೇ.9ರಷ್ಟು ಯಾದವರ ಮತಗಳಿವೆ. ಆದರೆ ಯಾದವ ಸಮುದಾಯದವರು ಮುಖ್ಯಮಂತ್ರಿಯಾಗುತ್ತಾರೆ, ನಮಗೆ ಉತ್ತರಪ್ರದೇಶದಲ್ಲಿ ಜವಾನನ ಕೆಲಸವೂ ಸಿಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರಪ್ರದೇಶದಲ್ಲಿ ಮುಸ್ಲಿಮ್, ಯಾದವರ ಸಹಯೋಗದೊಂದಿಗೆ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸುತ್ತಿದೆ. ಆದರೆ ಯಾದವರು ಮುಸ್ಲಿಮ್ ಸಮುದಾಯದ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲ ಎಂದು ಓವೈಸಿ ಹೇಳಿದರು.

ಕೋವಿಡ್ 19 ಸೋಂಕಿನಿಂದಾಗಿ ದೇಶದಲ್ಲಿ ಸಾವಿರಾರು ಮಂದಿ ಆಕ್ಸಿಜನ್ ಇಲ್ಲದೇ ಸಾವನ್ನಪ್ಪುವಂತಾಗಿತ್ತು. ನದಿ ದಡದಲ್ಲಿ ಶವಗಳನ್ನು ಎಸೆಯಲಾಗಿತ್ತು. ಅದನ್ನು ನಾಯಿಗಳು ತಿನ್ನುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ಕಾರಣಕ್ಕಾಗಿಯೇ ನಾವು ಬಿಜೆಪಿಯನ್ನು ಸೋಲಿಸಲು ಉತ್ತರಪ್ರದೇಶದಲ್ಲಿ ಸ್ಪರ್ಧಿಸುತ್ತಿರುವುದಾಗಿ ಓವೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.