ಜು. 31 ರೊಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಾರದಿದ್ದರೆ ಸರ್ಕಾರದಲ್ಲಿ ಯಾವುದೇ ಪರಿಹಾರ ಬಿಡುಗಡೆಯಾಗುವುದಿಲ್ಲ -Vishwanews24
ಬೆಂಗಳೂರು : ಈಗಾಗಲೇ ಮೈತ್ರಿ ಸರ್ಕಾರ ಪತನವಾಗಿದ್ದು, ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವದಲ್ಲಿಲ್ಲ, ಬಜೆಟ್ ಕೂಡ ಇನ್ನೂ ಪಾಸ್ ಆಗಿಲ್ಲ, ಹೀಗಾಗಿ ಆಗಸ್ಟ್ 1 ರಿಂದ ರಾಜ್ಯದ ಸರ್ಕಾರಿ ನೌಕರರ ಸಂಬಳ ಬಿಡುಗಡೆಯಾಗಲ್ಲ.
ಹೌದು, ಆ. 1 ರೊಳಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ, ವಿಧವಾ ವೇತನ, ವೃಧ್ಯಾಪ್ಯ ವೇತನ, ಮಾಸಿಕ ಪೆನ್ಷನ್ ಸೇರಿದಂತೆ ಸರ್ಕಾರಿ ನೌಕರರ ಸಂಬಳ ಕೂಡ ಬಿಡುಗಡೆಯಾಗಲ್ಲ.
ಸರ್ಕಾರದಲ್ಲಿ ಆ. 1 ರಿಂದ ಯಾವುದೇ ಪರಿಹಾರ ಬಿಡುಗಡೆಯಾಗುವುದಿಲ್ಲ. ಒಂದು ವೇಳೆ 6 ದಿನಗಳ ಒಳಗೆ ಹೊಸ ಸರ್ಕಾರ ರಚನೆಯಾಗಿ ಬಜೆಟ್ ಅಂಗೀಕಾರವಾಗಿ,ಆರ್ಥಿಕ ಮಸೂದೆ ಪಾಸ್ ಆಗಬೇಕು, ಇಲ್ಲದಿದ್ದರೆ ಸರ್ಕಾರದ ಖಜಾನೆಯಿಂದ ಬಿಡಿಗಾಸು ಕೂಡ ಬಿಡುಗಡೆಯಾಗಲ್ಲ ಎಂದು ಹೇಳಲಾಗುತ್ತಿದೆ.
ಆಗಸ್ಟ್ 1 ರೊಳಗೆ ಹೊಸ ಸರ್ಕಾರ ರಚನೆಯಾಗಬೇಕು. ವಿತ್ತಿಯ ಕಲಾಪ ನಡೆಸಿ, ಆರ್ಥಿಕ ಮಸೂದೆ ಪಾಸ್ ಮಾಡಬೇಕಾಗುತ್ತದೆ. ಅಲ್ಲಿಂದ ಅಂಗೀಕಾರ ಪಡೆದು ರಾಜ್ಯಪಾಲರಿಗೆ ಕಳುಹಿಸಬೇಕು. ಇದು ಮಾಡದಿದ್ದರೆ ರಾಜ್ಯದ ಜನತೆ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ.
ಮೈತ್ರಿ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ ಹೊಸ ಸರ್ಕಾರ ರಚನೆಗೆ ತರಾತುರಿಯಲ್ಲಿದ್ದ ಬಿಜೆಪಿ ನಾಯಕರು, ಪಕ್ಷದ ಕೇಂದ್ರ ನಾಯಕರಿಂದ ಯಾವುದೇ ಸೂಚನೆ ಬಾರದ ಕಾರಣ ಸುಮ್ಮನಾಗಿದ್ದಾರೆ. ಈ ಮಧ್ಯೆ ಜುಲೈ 31 ರೊಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಾರದಿದ್ದರೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ಬಿಕ್ಕಟ್ಟೊಂದು ಎದುರಾಗಲಿದೆ ಎಂದು ಹೇಳಲಾಗಿದೆ.
