ತೀವ್ರ ಕಸರತ್ತು ನಡೆಸಿದ ನಂತರವೂ ಬಹುಮತ ಸಾಧಿಸಲು ಸಾಧ್ಯವಾಗದೆ ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಆಶಾವಾದದಲ್ಲಿ ಬಿಜೆಪಿಯಿದೆ. ಕಾಂಗ್ರೆಸ್-ಜೆಡಿಎಸ್ ನಡುವಿನ ಆಂತರಿಕ ವಿರೋಧಾಭಾಸದಿಂದ ಸರ್ಕಾರ ಮುರಿದುಬಿದ್ದು ಮತ್ತೆ ತಾವು ಅಧಿಕಾರಕ್ಕೆ ಬರಬಹುದು ಎಂಬ ಭಾವನೆ ಬಿಜೆಪಿ ನಾಯಕರದ್ದು.
ಸತತ ಮೂರು ದಿನಗಳ ರಾಜಕೀಯ ನಾಟಕ ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್ ಯಡಿಯೂರಪ್ಪನವರು ರಾಜೀನಾಮೆ ನೀಡುವ ಮೂಲಕ ನಿಂತಿದೆ. ಬಹುಮತ ಸಾಬೀತುಪಡಿಸಲು ಬಿಜೆಪಿಗೆ 7 ಶಾಸಕರ ಅವಶ್ಯಕತೆಯಿತ್ತು.
ನಾವು ಹೋರಾಟದಲ್ಲಿ ಸೋತಿರಬಹುದು. ಆದರೆ ಅಂತಿಮವಾಗಿ ಯುದ್ಧದಲ್ಲಿ ನಾವೆ ಗೆಲ್ಲುವುದು ಎಂದು 2019ರ ಲೋಕಸಭೆ ಚುನಾವಣೆಯನ್ನು ಉಲ್ಲೇಖ ಮಾಡಿ ಪಕ್ಷದ ನಾಯಕರೊಬ್ಬರು ಹೇಳುತ್ತಾರೆ.
ಕರ್ನಾಟಕದಲ್ಲಿ ಸರ್ಕಾರ ರಚಿಸಬೇಕೆಂಬ ಬಿಜೆಪಿಯ ಪ್ರಯತ್ನಕ್ಕೆ ಪೂರಕ ಅಂಶಗಳು ಎರಡು, ಒಂದು ಜನರ ತೀರ್ಪು ಬಿಜೆಪಿ ಪರವಾಗಿದೆ, ಇನ್ನೊಂದು ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಬೇರೆ ಯಾವ ರಾಜ್ಯಗಳಲ್ಲಿಯೂ ಬಿಜೆಪಿ ವಿರೋಧ ಪಕ್ಷಗಳಿಗೆ ಇಷ್ಟೊಂದು ಪ್ರಬಲ ಪೈಪೋಟಿ ನೀಡಿದ್ದಿಲ್ಲ.ಕರ್ನಾಟಕದಲ್ಲಿ ಲಿಂಗಾಯತರ ಮತ ಬಿಜೆಪಿ ಪರವಾಗಿರುವುದು ಕೂಡ ಪಕ್ಷಕ್ಕೆ ಒಳ್ಳೆಯದಾಗಿದೆ.
ಮೂರು ದಿನಗಳ ರಾಜಕೀಯ ನಾಟಕಗಳ ನಂತರ ಬಿಜೆಪಿ ಸರ್ಕಾರ ಬಿದ್ದುಹೋಗಿದ್ದು ಮೇಲ್ನೋಟಕ್ಕೆ ಬಿಜೆಪಿಗೆ ಹಿನ್ನಡೆ ಕಂಡುಬಂದಿದೆ. ತಮ್ಮ ಶಾಸಕರನ್ನು ಬಿಜೆಪಿ ಸೆಳೆಯಲು ಯತ್ನಿಸಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಗಂಭೀರ ಆರೋಪಗಳನ್ನು ಕೂಡ ಮಾಡಿದೆ.
ಆದರೆ ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದೆ. ಕೆಲವು ಅಂಶಗಳು ಮುಂದಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪೂರಕ ವಾತಾವರಣ ನಿರ್ಮಿಸಿಕೊಡಬಹುದು ಎನ್ನಲಾಗುತ್ತಿದೆ.
ಕಾಂಗ್ರೆಸ್-ಜೆಡಿಎಸ್ ನೊಳಗೆ ಆಂತರಿಕ ಭಿನ್ನಾಭಿಪ್ರಾಯಗಳಿವೆ. ಮೊನ್ನೆ ನಡೆದ ಚುನಾವಣೆಯಲ್ಲಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜೆಡಿಎಸ್ ಅಭ್ಯರ್ಥಿಗಳಿಗೇ ಪ್ರಬಲ ಸ್ಪರ್ಧಿಗಳಾಗಿದ್ದರು. ಹಳೆ ಮೈಸೂರು ಪ್ರಾಂತ್ಯ ಮತ್ತು ಒಕ್ಕಲಿಗರು ಪ್ರಾಬಲ್ಯವಿರುವ ಸ್ಥಳಗಳಲ್ಲಿ ಜೆಡಿಎಸ್ ಪ್ರಬಲವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಸ್ಥಳಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯಬಹುದು. ಅಧಿಕಾರ ಗಳಿಸುವ ಏಕೈಕ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಲಿಂಗಾಯತರಿಗೆ ಮತ್ತಷ್ಟು ಅಸಮಾಧಾನ ಉಂಟುಮಾಡಿರಬಹುದು. ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ವರವಾಗಲಿದೆ ಎನ್ನುತ್ತಾರೆ ಬಿಜೆಪಿ ನಾಯಕರು.