ಜೈ ಶ್ರೀರಾಮ್ ಘೋಷಣೆಯನ್ನು ಬಿಜೆಪಿ ರಾಜಕೀಯವಾಗಿ ಬಳಕೆ ಮಾಡುತ್ತಿದೆ : ಮಮತಾ ಬ್ಯಾನರ್ಜಿ -Vishwanews24
ಕೋಲ್ಕತ್ತಾ : ಬಿಜೆಪಿಯು ಜೈಶ್ರೀರಾಮ್ ಘೋಷಣೆ ಮೂಲಕ ರಾಜಕಾರಣದಲ್ಲಿ ಧರ್ಮವನ್ನು ಬೆರೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಬಿಜೆಪಿಯು 10 ಲಕ್ಷ ಜೈಶ್ರೀರಾಮ್ ಎಂಬ ಪೋಸ್ಟ್ ಕಾರ್ಡ್ ಗಳನ್ನು ಮಮತಾರಿಗೆ ಕಳುಹಿಸಲು ಪ್ಲಾನ್ ಮಾಡಿಕೊಂಡಿದೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ ದೀದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಅದರ ನಾಯಕರು ಜೈ ಶ್ರೀರಾಮ್ ಎಂಬ ಧಾರ್ಮಿಕ ಘೋಷಣೆಯನ್ನೇ ತಮ್ಮ ಪಕ್ಷದ ಘೋಷಣೆಯನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿಯ ಮಾಧ್ಯಮಗಳು ಹಾಗೂ ಸುಳ್ಳು ವಿಡಿಯೋ, ಸುದ್ದಿ ತಪ್ಪು ಮಾಹಿತಿ ಮೂಲಕ ತಮ್ಮ ತತ್ವಗಳನ್ನು ಹರಡುತ್ತಿದ್ದಾರೆ. ಅಲ್ಲದೇ ಸತ್ಯ ಹಾಗೂ ನೈಜತೆ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.
ರಾಜಾರಾಮ್ ಮೋಹನ್ ರಾಯ್ ರಿಂದ ವಿದ್ಯಾಸಾಗರ್ ವರೆಗೆ ಹಲವು ಸಮಾಜ ಸುಧಾರಕರು ಬಂಗಾಳದ ಸಹಿಷ್ಣುತೆ, ಅಭಿವೃದ್ಧಿಗೆ ಕೊಡುವೆ ನೀಡಿದ್ದಾರೆ. ಆದರೆ, ಬಿಜೆಪಿ ಬಂಗಾಳವನ್ನು ಟಾರ್ಗೆಟ್ ಮಾಡಿದೆ ಎಂದು ಹೇಳಿದ್ದಾರೆ.
ಸಮಾವೇಶಗಳಲ್ಲಿ ರಾಜಕೀಯ ಪಕ್ಷಗಳ ಯಾವುದೇ ಘೋಷಣೆಗಳ ಬಗ್ಗೆ ನನಗೆ ತಕರಾರು ಇಲ್ಲ. ಆದರೆ ಜೈ ಸಿಯಾ ರಾಮ್, ಜೈ ರಾಮ್ ಜಿ ಕೀ, ರಾಮ್ ನಾಮ್ ಸತ್ಯ ಹೈ ಈ ಘೋಷಣೆಗಳು ಧಾರ್ಮಿಕ ಹಾಗೂ ಸಾಮಾಜಿಕ ಸಂಬಂಧ ಹೊಂದಿವೆ. ಈ ಭಾವನೆಗಳನ್ನು ನಾವು ಗೌರವಿಸುತ್ತೇವೆ, ಆದರೆ ಜೈ ಶ್ರೀರಾಮ್ ಘೋಷಣೆಯನ್ನು ಬಿಜೆಪಿ ರಾಜಕೀಯವಾಗಿ ಬಳಕೆ ಮಾಡುತ್ತಿದ್ದು, ಧಾರ್ಮಿಕತೆಯನ್ನು ರಾಜಕೀಯದೊಂದಿಗೆ ತಳುಕು ಹಾಕುತ್ತಿದೆ. ಇದು ವಿಧ್ವಂಸಕತೆ ಮತ್ತು ಹಿಂಸೆಯ ಮೂಲಕ ದ್ವೇಷವನ್ನು ಹರಡುವ ಸ್ಪಷ್ಟ ಉದ್ದೇಶ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
