ಡಿಜಿಟಲ್‌ ಕರ್ನಾಟಕದ ಮೂಲಕ ಡಿಜಿಟಲ್‌ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ : ಅಶ್ವತ್ಥನಾರಾಯಣ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ‘ನಗರದಾದ್ಯಂತ ನಿತ್ಯ ಒಂದು ಗಂಟೆ ಉಚಿತವಾಗಿ ವೈ–ಫೈ ಸೇವೆ ಒದಗಿಸಲಾಗುತ್ತದೆ. ಎಸಿಟಿ ಕಂಪನಿಯು ಯಾವುದೇ ಶುಲ್ಕ ಪಡೆಯದೆಯೇ ಈ ಸೇವೆಯನ್ನು ಒದಗಿಸಲು ಮುಂದೆ ಬಂದಿದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಬುಧವಾರ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿಜಿಟಲ್‌ ಕರ್ನಾಟಕದ ಮೂಲಕ ಡಿಜಿಟಲ್‌ ಇಂಡಿಯಾದ ಕನಸು ಸಾಕಾರಗೊಳಿಸುವುದು ನಮ್ಮ ಗುರಿ. ಇದನ್ನು ಸಾಕಾರಗೊಳಿಸುವ ನಿಟ್ಟಿನ ಮೊದಲ ಹೆಜ್ಜೆಯಾಗಿ ನಗರದಲ್ಲಿ ಕ್ಷಿಪ್ರ ವೇಗದ ಇಂಟರ್ನೆಟ್‌ ಸಂಪರ್ಕ ಕಲ್ಪಿಸಲಾಗುತ್ತಿದೆ. ಎಸಿಟಿ ಸಂಸ್ಥೆಯು ವೈ–ಫೈ ಗೋಪುರಗಳ ಜೊತೆ ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಿದೆ. ಈ ಯೋಜನೆಗೆ ಸಂಸ್ಥೆ ₹ 100 ಕೋಟಿ ವೆಚ್ಚಮಾಡಲಿದೆ. ಯೋಜನೆ ಪೂರ್ಣಗೊಳ್ಳಲು 9 ತಿಂಗಳು ಬೇಕು’ ಎಂದು ಸಚಿವರು ವಿವರಿಸಿದರು.

ಎಸಿಟಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲ ಮಲ್ಲಾಡಿ, ‘ಬೆಂಗಳೂರನ್ನು ಡಿಜಿಟಲ್‌ ಸಿಟಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ದೊರೆತಿರುವ ಈ ಅವಕಾಶಕ್ಕೆ ಧನ್ಯವಾದ ಹೇಳುತ್ತೇವೆ. ಈ ಮೂಲಕ ನಗರದ ಜನ ಜೀವನದಲ್ಲಿ ಬದಲಾವಣೆ ತರುವ ಉದ್ದೇಶ ನಮ್ಮದು. ವೈ–ಫೈ ಗೋಪುರಗಳ ನಿರ್ವಹಣೆಗೆ  ಬಿಬಿಎಂಪಿ ವತಿಯಿಂದ ವಿದ್ಯುತ್‌ಪೂರೈಸಬೇಕು. ನಾವೇ ವಿದ್ಯುತ್‌ ಬಿಲ್‌ ಪಾವತಿಸುತ್ತೇವೆ’ ಎಂದುತಿಳಿಸಿದರು.