ತಮಿಳುನಾಡಿನಲ್ಲಿ ಘರ್ಜಿಸಿದ ‘ಗಜ’ ಚಂಡಮಾರುತ, ; 12 ಮಂದಿ ಬಲಿ , ಹಲವರು ಕಣ್ಮರೆ,
ನಾಗಪಟ್ಟಿಣಂ: ತೀವ್ರ ಪರಿಣಾಮ ಬೀರುವ ಗಜ ಚಂಡಮಾರುತ ತಮಿಳುನಾಡಿನ ತೀರ ದಾಟಿ ನಾಗಪಟ್ಟಣಂ ಮತ್ತು ಹತ್ತಿರದ ವೇದರಣ್ಣಿಯಂ ನಡುವೆ ಶುಕ್ರವಾರ ನಸುಕಿನ ಜಾವ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡು ರಾಜ್ಯದ ನಾಗಪಟ್ಟಣಂ, ಪುದುಕೊಟ್ಟೈ, ರಾಮನಾಥಪುರಂ ಮತ್ತು ತಿರುವಾರೂರು ಸೇರಿದಂತೆ 6 ಜಿಲ್ಲೆಗಳ ತಗ್ಗು ಪ್ರದೇಶಗಳಿಂದ ಸುಮಾರು 76,290 ಮಂದಿಯನ್ನು ರಕ್ಷಿಸಲಾಗಿದ್ದು ಅವರಿಗೆ ಸುಮಾರು 300 ಆಶ್ರಯ ತಾಣಗಳಲ್ಲಿ ಆಶ್ರಯ ಒದಗಿಸಲಾಗಿದೆ.
ಗಜ ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರಾಂತ್ಯಗಳ ಮೇಲೆ ಅಪ್ಪಳಿಸಿದ್ದು ಭಾರೀ ಮಳೆ ರೌದ್ರಾವತಾರದಿಂದ 12 ಜನರು ಬಲಿಯಾಗಿದ್ದು, ಹಲವಾರು ಮಂದಿ ಕಣ್ಮರೆಯಾಗಿದ್ದಾರೆ. ಚಂಡಮಾರುತದ ಆರ್ಭಟಕ್ಕೆ ಎಂಟು ಜಿಲ್ಲೆಗಳ ಅನೇಕ ಮನೆಗಳಿಗೆ ಹಾನಿಯಾಗಿವೆ. ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಕೆಲವೆಡೆ ಮನೆಗಳು ಭಾಗಶಃ ಕುಸಿದಿವೆ. ಭೂ ಕುಸಿತದಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶಗಳಿಂದ 82,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ನಾಗಪಟ್ಟಣಂ ಮತ್ತು ವೇದರಣ್ಣಿಯಂ ಮಧ್ಯೆ ತಮಿಳುನಾಡು ಮತ್ತು ಪುದುಚೆರಿ ತೀರವನ್ನು ಗಜ ಚಂಡಮಾರುತ ದಾಟಿದ್ದು ಗಂಟೆಗೆ 110 ಕಿಲೋ ಮೀಟರ್ ನಿಂದ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಹೇಳಿದೆ.ಚಂಡಮಾರುತ ಭೂ ಪ್ರದೇಶದ ಮಧ್ಯೆ ಕೇಂದ್ರೀಕೃತವಾಗಿದ್ದರೂ ಕೂಡ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಎಲ್ಲ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ನೆಲಮಟ್ಟಕ್ಕೆ ಕುಸಿದ ಬಳಿಕವೂ ಗಜ ಚಂಡಮಾರುತ ಪ್ರಭಾವ ಸ್ವಲ್ಪಮಟ್ಟಿಗೆ ಇರಲಿದ್ದು, 60 ರಿಂದ 70 ಕಿಲೋಮೀಟರ್ ವೇಗದಲ್ಲಿ ತಮಿಳುನಾಡಿನ ಒಳನಾಡು ಪ್ರದೇಶಗಳಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಆರ್ಭಟದಿಂದ ಕೆಲವೆಡೆ ಸಾವು ನೋವು ಸಂಭವಿಸಿದ್ದು, ಈವರೆಗೆ ಎಂಟು ಜನ ಬಲಿಯಾಗಿ, ಅನೇಕರು ಗಾಯಗೊಂಡಿದ್ಧಾರೆ. ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ. ಗಜ ಚಂಡಮಾರುತದ ಆರ್ಭಟದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತಮಿಳುನಾಡಿನ ಎಂಟು ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಅಪಾಯದಲ್ಲಿ ಸಿಲುಕಿದ್ದ 82,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.


