ತೆಂಗಿನಕಾಯಿ ಹಾಲು ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂದು ತಿಳಿಯಿರಿ – Vishwanews24

Featured, ವಿಶೇಷ ಲೇಖನಗಳು

ಕಾಮಧೇನು ಕಲ್ಪವೃಕ್ಷ ಎಂದರೆ ತೆಂಗಿನ ಗಿಡ. ಜೀವನದ ಪ್ರತಿ ಹಂತದಲ್ಲಿಯೂ ತೆಂಗಿನ ಅಗತ್ಯ ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಅದರಂತೆ ತೆಂಗಿನಿಂದ ತೆಗೆದ ಹಾಲು ಕೂಡ ಆರೋಗ್ಯದಾಯಕ.

ಚರ್ಮದ ಆರೈಕೆಗೆ ತೆಂಗಿನ ಹಾಲಿದ್ದರೆ ಸಾಕು, ಬೇರಾವ ಅನಾರೋಗ್ಯಕರ ರಾಸಾಯನಿಕ ಆಧಾರಿತ ಪ್ರಸಾಧನವೇ ಬೇಡ. ತೆಂಗಿನ ಹಾಲು ಇಂದು ಮಾರುಕಟ್ಟೆಯಲ್ಲಿ ದೊರಕುತ್ತದಾದರೂ ಇದರಲ್ಲಿರುವ ಸಂರಕ್ಷಕಗಳು ಇದರ ಗುಣವನ್ನು ಕೊಂಚ ಕಳಪೆಯಾಗಿಸುತ್ತವೆ. ಆದ್ದರಿಂದ ಮನೆಯಲ್ಲಿಯೇ ತಯಾರಿಸಿಕೊಳ್ಳುವುದು ತುಂಬಾ ಉತ್ತಮ….

ತೆಂಗಿನ ಹಾಲು ತಯಾರಿಸುವ ವಿಧಾನ ಇದಕ್ಕಾಗಿ ಒಂದು ತೆಂಗಿನ ತುರಿಯನ್ನು ಕೊಂಚ ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ ಸುಮಾರು ಮೂವತ್ತು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ನಂತರ ತೆಳುವಾದ ಬಟ್ಟೆಯಲ್ಲಿ ಇದನ್ನು ಹಾಕಿ ಬಟ್ಟೆಯನ್ನು ತಿರುಚುತ್ತಾ ಹಾಲನ್ನು ಹಿಂಡಿಕೊಳ್ಳಿ. ಹಿಂಡಿದ ಬಳಿಕವೂ ಕೆಲವಾರು ಬಾರಿ ಕೊಂಚ ಕೊಂಚವೇ ನೀರು ಬೆರೆಸುತ್ತಾ ಹಾಲನ್ನು ಹಿಂಡಿ. ಹಾಲಿನ ಬಣ್ಣ ತಿಳಿಯಾಗಲು ತೊಡಗುವಾಗ ಹಿಂಡಿಯನ್ನು ವರ್ಜಿಸಿ. ಈ ನೀರೇ ತೆಂಗಿನ ಹಾಲು.,,,

ಬಲವಾಗುವ ಮೂಳೆ: ಮೂಳೆಗಳನ್ನು ಬಲವಾಗಿಸಲು ಕ್ಯಾಲ್ಸಿಯಂನಂತೆ ಪೊಟ್ಯಾಷಿಯಂ ಕೂಡ ದೇಹದ ಮೂಳೆಗಳನ್ನು ಬಲಗೊಳಿಸಲು ಅತ್ಯಗತ್ಯ.  ತೆಂಗಿನ ಹಾಲಿನಲ್ಲಿ ಪೊಟ್ಯಾಷಿಯಂ ಅಂಶ ಅಧಿಕವಾಗಿದೆ. ಹಾಲಿನ ಸೇವನೆಯಿಂದ ಮೂಳೆ ಬಲಗೊಳ್ಳುತ್ತದೆ.

ಸುಂದರ ಕೂದಲಿಗೆ: ತೆಂಗಿನ ಕಾಯಿಯಿಂದ ಹಾಲನ್ನು ತೆಗೆದು ಅದಕ್ಕೆ ಜೇನುತುಪ್ಪ ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಅದನ್ನು ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.  ಈ ರೀತಿ ಆಗ್ಗಾಗ್ಗೆ ಮಾಡುತ್ತಿದ್ದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಜೇನಿನ ಬದಲು ಮೆಂತ್ಯ ಅರೆದು ಮಿಶ್ರಣ ಮಾಡಿ. ತಲೆಯ ಬುಡಕ್ಕೆ ಈ ಮಿಶ್ರಣವನ್ನು ಚೆನ್ನಾಗಿ ಹಚ್ಚಿ ಅದು ಒಣಗುವವರೆಗೆ ಬಿಡಿ (20 ರಿಂದ 25 ನಿಮಿಷ) ನಂತರ ತಲೆಯನ್ನು ಚೆನ್ನಾಗಿ ತೊಳೆಯಿರಿ. ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ, ಹೊಟ್ಟು ಸಮಸ್ಯೆಯಿಂದಲೂ ಮುಕ್ತಿ ಹೊಂದಬಹುದು.

ತೂಕ ಕಾಪಾಡಿಕೊಳ್ಳಲು: ಸಮತೂಕ ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗಿದೆ ತೆಂಗಿನ ಹಾಲು. ಈ ಹಾಲನ್ನು ಕುಡಿದರೆ ಹೊಟ್ಟೆ ಬೇಗ ತುಂಬಿದಂತೆ ಅನ್ನಿಸುತ್ತದೆ.  ಹೆಚ್ಚು ತಿನ್ನಲಾಗುವುದಿಲ್ಲ. ಆದ್ದರಿಂದ ಸಮತೂಕ ಕಾಪಾಡಿಕೊಳ್ಳಬಹುದು.

ಸ್ನಾಯು, ನರಗಳಿಗೆ ಪ್ರಯೋಜನಕಾರಿ: ಸ್ನಾಯು ಸೆಳೆತ ಅಥವಾ ಸಹಿಸಲಾಗದ ನೋವಿಗೆ ತೆಂಗಿನ ಹಾಲು ರಾಮಬಾಣ. ಸ್ನಾಯು ಹಾಗೂ ನರ ಬಲಗೊಳ್ಳುತ್ತವೆ. ತೆಂಗಿನ ಹಾಲಿನಲ್ಲಿ ಮ್ಯಾಗ್ನಿಷಿಯಂ ಅಂಶ ಹೆಚ್ಚಿದೆ. ಇದು ನೋವು ನಿವಾರಕದಂತೆ ಕಾರ್ಯ ನಿರ್ವಹಿಸುತ್ತದೆ.

ರಕ್ತಹೀನತೆ: ರಕ್ತಹೀನತೆಗೆ ಕಬ್ಬಿಣದ ಕೊರತೆಯೇ ಮುಖ್ಯ ಕಾರಣ. ಒಂದು ಕಪ್ ತೆಂಗಿನ ಹಾಲಿನಲ್ಲಿ ದಿನಕ್ಕೆ ಬೇಕಾದ ಕಾಲು ಭಾಗದ ಕಬ್ಬಿಣದ ಅಂಶ ಸಿಗುತ್ತದೆ.

ಸಂಧಿವಾತ ಸಮಸ್ಯೆ: ಸಂಧಿವಾತ  ಉರಿಯೂತದ ಸಮಸ್ಯೆ ಇರುವವರಿಗೆ  ತೆಂಗಿನ ಹಾಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೇಹಕ್ಕೆ ಸೆಲೆನಿಯಮ್ ಅಂಶದ ಅತ್ಯಗತ್ಯ. ಇದು ಕಡಿಮೆ ಆದಲ್ಲಿ ಸಂಧಿವಾತ ಕಾಣಿಸಿಕೊಳ್ಳುತ್ತದೆ.

ಬಿಸಿಲಿಗೆ ಕಪ್ಪಾಗಿದ್ದ ಚರ್ಮವನ್ನು ಸಹಜವರ್ಣಕ್ಕೆ ತರಲು : ಬಿಸಿಲಿನ ಝಳದಿಂದ ಜರ್ಝರಿತ ಚರ್ಮಕ್ಕೂ ತೆಂಗಿನ ಹಾಲಿನ ಆರೈಕೆ ಸೂಕ್ತವಾಗಿದೆ. ಇದಕ್ಕಾಗಿ ಬಿಸಿಲಿಗೆ ಒಡ್ಡಿದ್ದ ಚರ್ಮದ ಎಲ್ಲಾ ಭಾಗಗಳಿಗೂ ರಾತ್ರಿ ಮಲಗುವ ಮುನ್ನ ಮೊದಲು ತಣ್ಣೀರಿನಿಂದ ತೊಳೆದು ತೆಂಗಿನ ಹಾಲಿನಲ್ಲಿ ಮುಳುಗಿಸಿದ ಹತ್ತಿಯುಂಡೆಯನ್ನು ಒರೆಸಿಕೊಳ್ಳಿ. ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮ ಕಪ್ಪಗಾಗದೇ ಇರಲು ಹಾಗೂ ಬಿಸಿಲಿನ ಕಾರಣ ಘಾಸಿಗೊಂಡಿದ್ದ ಹಾಗೂ ಕೆಂಪಗಾಗಿದ್ದುದು ಎಲ್ಲವೂ ಸರಿಯಾಗುತ್ತವೆ.

ಮೇಕಪ್ ನಿವಾರಣೆಗೆ: ಮೇಕಪ್ ನಿವಾರಣೆಗೆ ತೆಂಗಿನ ಹಾಲು ಅತ್ಯುತ್ತಮವಾದ ನೈಸರ್ಗಿಕ ಸಾಧನವಾಗಿದೆ. ಇದು ಮೇಕಪ್ ನ ಕಣಗಳನ್ನು ಬುಡದಿಂದ ನಿವಾರಿಸುವುದರ ಜೊತೆಗೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನೂ ನೀಡುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚ ತೆಂಗಿನ ಹಾಲು ಮತ್ತು ಒಂದು ಚಿಕ್ಕ ಚಮಚ ಆಲಿವ್ ಎಣ್ಣೆ ಬೆರೆಸಿ ಈ ದ್ರವದಲ್ಲಿ ಹತ್ತಿಯುಂಡೆಯನ್ನು ಬೆರೆಸಿ ಕೊಂಚವೇ ಒತ್ತಡದಿಂದ ಒರೆಸಿಕೊಳ್ಳುವ ಮೂಲಕ ಮೇಕಪ್ ನಿವಾರಿಸಲು ಸಾಧ್ಯ.