ದೇಶಕ್ಕಾಗಿ ಆರ್​ಎಸ್​ಎಸ್​ನ ಯಾರು ತಮ್ಮ ಪ್ರಾಣತ್ಯಾಗ ಮಾಡಿಲ್ಲ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರೂರತ್ವ ತುಂಬಿದೆ : ಸಿದ್ದರಾಮಯ್ಯ -Vishwanews24

Featured, ರಾಜ್ಯ ನ್ಯೂಸ್

ಮೈಸೂರು: “ಸಾವರ್ಕರ್​​ ಆರ್​ಎಸ್​ಎಸ್​​ನ ಆರಾಧ್ಯ ದೈವ, ಆತನ ಕೊಡುಗೆ ದೇಶಕ್ಕೆ ಶೂನ್ಯ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿ ನಡೆದ ಸಿಎಎ ವಿರುದ್ಧದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಅವನ ಹೆಸರು ದಾಮೋದರ ಸಾವರ್ಕರ್. ಆದರೆ, ಆರ್​ಎಸ್​​ಎಸ್​​ನವರು ಅವನಿಗೆ ವೀರ ಸಾವರ್ಕರ್​​ ಎಂದು ಹೆಸರಿಟ್ಟಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಜೈಲಿಗೆ ಹೋಗಿಲ್ಲ. ಸಾವರ್ಕರ್ ತನ್ನ ಇಂಗ್ಲೆಂಡ್‌ ಮೂಲದ ಸ್ನೇಹಿತನ ಕಾರಣಕ್ಕಾಗಿ ಜೈಲಿಗೆ ಹೋಗಿದ್ದ ಎಂದರು.

ಆರ್​ಎಸ್​​ಎಸ್​​​ನಲ್ಲಿ ಒಬ್ಬನೇ ಒಬ್ಬ ಕೂಡ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ದೇಶಕ್ಕಾಗಿ ಆರ್​ಎಸ್​ಎಸ್​ನ ಯಾರು ತಮ್ಮ ಪ್ರಾಣತ್ಯಾಗ ಮಾಡಿಲ್ಲ. ಅಂಡಮಾನ್​​ ಜೈಲಿಗೆ ಹೋಗಿದ್ದ ಸಾವರ್ಕರ್​​​​​, ನಾನು ತಪ್ಪು ಮಾಡುವುದಿಲ್ಲ. ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಬ್ರಿಟೀಷರಿಗೆ ಮನವಿ ಪತ್ರ ಬರೆದಿದ್ದ ಎಂದರು ಸಿದ್ದರಾಮಯ್ಯ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರೂರತ್ವ ತುಂಬಿದೆ. ಇಲ್ಲಿ ಮಾನವೀಯತೆಗೆ ಬೆಲೆ ಇಲ್ಲ. ಕೇವಲ ಕ್ರೂರತೆ ತುಂಬಿರುವ ಸರ್ಕಾರ. ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸುವವರು ದೇಶದ್ರೋಹಿಗಳು ಎನ್ನುವುದಾದರೆ ಸಂವಿಧಾನದ ವಿರುದ್ಧ ಇರುವ ನಿಮ್ಮನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.