ದೇಶದಲ್ಲಿ ಮೋದಿಗೆ ಸೆಡ್ಡು ಹೊಡೆಯಲು ದೇವೇಗೌಡರ ಕುಟುಂಬಕ್ಕೆ ಮಾತ್ರ ಸಾಧ್ಯ,: ಕುಮಾರಸ್ವಾಮಿ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ದಿಲ್ಲಿಯಲ್ಲಿ ಮತ್ತೆ ಅಧಿಕಾರ ಹಿಡಿಯಲು ಪ್ರಧಾನಿ ಮೋದಿಯವರು ನೀಚ ರಾಜಕಾರಣದಲ್ಲಿ ತೊಡಗಿದ್ದಾರೆ. ಇದು ಅವರಿಗೆ ಶೋಭೆ ತಂದುಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಉತ್ತರ ಕ್ಷೇತ್ರದ ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮೇ ಲೇಔಟ್‌ ವ್ಯಾಪ್ತಿಯಲ್ಲಿ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಪರ ಸೋಮವಾರ ಜಂಟಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಚಾರದಲ್ಲಿ ಸಿಎಂ ಜತೆ ಡಿಸಿಎಂ ಡಾ.ಪರಮೇಶ್ವರ ಹಾಗೂ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಸಾಥ್‌ ನೀಡಿದರು.
“ದೇಶದ ನಾನಾ ಸ್ವಾಯತ್ತ ಸಂಸ್ಥೆಗಳು ಎಗ್ಗಿಲ್ಲದೆ ಮೋದಿ ಪರವಾಗಿ ಕಾರ್ಯನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ನೀಚ ಮಟ್ಟಕ್ಕೆ ಇಳಿದ ಪ್ರಧಾನಿ ಮೋದಿ ಮಾತ್ರ. ದೇವೇಗೌಡರಿಗೆ ವಯಸ್ಸಾಗಿದ್ದರೂ, ಅಗಾಧ ನೆನಪಿನ ಶಕ್ತಿಯಿದೆ. ಅವರ ಮೇಲೆ ಒಂದೂ ಕಪ್ಪು ಚುಕ್ಕೆ ಇಲ್ಲ. ದೇಶದಲ್ಲಿ ಮೋದಿಗೆ ಸೆಡ್ಡು ಹೊಡೆಯುವ ಕುಟುಂಬ ಇದ್ದಲ್ಲಿ ಅದು ದೇವೇಗೌಡರ ಕುಟುಂಬ ಮಾತ್ರ,” ಎಂದು ಕುಮಾರಸ್ವಾಮಿ ಹೇಳಿದರು.
ನಿಮ್ಮೆಲ್ಲರ ಆಶೀರ್ವಾದ ಇರುವಾಗ ಇನ್ನಷ್ಟು ದಿನ ಉತ್ತಮ ಆಡಳಿತ ನೀಡುತ್ತೇನೆ. ದೋಸ್ತಿ ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತೇವೆ. ಈ ವಿಚಾರದಲ್ಲಿ ನಿಮಗೆ ಅನುಮಾನ ಬೇಡ. ದೋಸ್ತಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಸರಕಾರವನ್ನು ಸುಭದ್ರಗೊಳಿಸಿ,” ಎಂದು ಕುಮಾರಸ್ವಾಮಿ ಮನವಿ ಮಾಡಿದರು.