ದೇಶಪ್ರೇಮ ಇದ್ದರೆ ಮಸೀದಿಗಳ ಮೇಲೆ ಹಸಿರು ಧ್ವಜ, ಮೈಕ್ ಹಚ್ಚುವ ಬದಲು ರಾಷ್ಟ್ರಧ್ವಜ ಹಾರಿಸಿ: ಸಂಸದ ಸುರೇಶ್ ಅಂಗಡಿ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾರ್ಥನಾ ಮಂದಿರದಲ್ಲಿ ನಿತ್ಯ ಮೈಕ್ ಹಾಗೂ ಹಸಿರು ಧ್ವಜ ಹಚ್ಚುವುದರ ಬದಲು ದೇಶ ಪ್ರೇಮವಿದ್ದರೆ ಪ್ರಾರ್ಥನಾ ಮಂದಿರದ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಹಾಗೇನಾದರು ಆದರೆ ಅಂಥವರ ದೇಶಪ್ರೇಮಕ್ಕೆ ನಾನೇ ಶರಣಾಗುವೆ ಎಂದರು.
ಪಾಕಿಸ್ತಾನ ಪರ ಕೆಲಸ ಮಾಡಲು ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದೆ. ಉಗ್ರರ ಸಾವಿನ ಲೆಕ್ಕ ಕೇಳುತ್ತಿರುವ ಕಾಂಗ್ರೆಸ್ಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ದೂರಿದರು.
ಉಗ್ರಗಾಮಿಗಳು ನಮ್ಮ ಮೇಲೆ ದಾಳಿ ನಡೆಸಿದಾಗ ನಾವು ಸುಮ್ಮನಿರಬೇಕಾ. ದೇಶದೆಲ್ಲೆಡೆ ಭಾರತ ತೋರಿದ ಪರಾಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಗಂಭೀರವಾದ ವಿಷಯದಲ್ಲಿ ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡುತ್ತಾರೆ. ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಮದುರ್ಗದಲ್ಲಿ ಬೆಳಕಿಗೆ ಬಂದ ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಅಧಿಕಾರಿಗಳು ಒಳಗಾಗಿದ್ದಾರೆ. ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಅಂಥವರ ರಕ್ಷಣೆಗೆ ಸಮ್ಮಿಶ್ರ ಸರ್ಕಾರ ನಿಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಸ್ಟೇಟಸ್ ಹಾಕುವವರ ವಿರುದ್ಧ ಕ್ರಮವಾಗುತ್ತಿಲ್ಲ. ಪೊಲೀಸರ ಮೇಲೆ ಸಮ್ಮಿಶ್ರ ಸರ್ಕಾರ ಒತ್ತಡ ಹಾಕುತ್ತಿದೆ. ಆ ಮೂಲಕ ದೇಶದ್ರೋಹಿಗಳನ್ನು ಕಾಂಗ್ರೆಸ್-ಜೆಡಿಎಸ್ ರಕ್ಷಣೆ ಮಾಡುತ್ತಿವೆ ಎಂದು ಆರೋಪಿಸಿದರು.
