ದ್ವೇಷ ಭಾಷಣ ಮಾಡಿರುವ ಸಿ.ಟಿ.ರವಿಯನ್ನು ಕೂಡಲೇ ಬಂಧಿಸಿ: ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹ – vishwanews24
ದ್ವೇಷ ಭಾಷಣ ಮಾಡಿರುವ ಸಿ.ಟಿ.ರವಿಯನ್ನು ಕೂಡಲೇ ಬಂಧಿಸಿ: ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹ
ಮಂಗಳೂರು: ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನೇ ರಾಜಕೀಯ ಎಂದುಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಗುರುವಾರ ಚಿಕ್ಕಮಗಳೂರಿನಲ್ಲಿ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. “ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರುವುದಿಲ್ಲ” ಎಂದು ಸಿ.ಟಿ.ರವಿ ದ್ವೇಷದ ಹೇಳಿಕೆ ನೀಡಿದ್ದಾರೆ. ಎಲ್ಲ ವಿಷಯದಲ್ಲೂ ಮುಸ್ಲಿಮರನ್ನು ಎಳೆದು ತಂದು ವಿಷಯಾಂತರ ಮಾಡುವ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಒಂದು ಧರ್ಮದ ಗೌರವಾನ್ವಿತ ಧರ್ಮಗುರುಗಳನ್ನು ಅವಮಾನಿಸುವ ಮೂಲಕ ಜನರನ್ನು ಧರ್ಮದ ಆಧಾರದಲ್ಲಿ ಪ್ರಚೋದಿಸಿ, ವಿಭಜಿಸಿ, ದ್ವೇಷ ಹರಡುವ ದುಷ್ಟ ಸಂಚು ಎಸಗಿದ್ದಾರೆ. ಅದಕ್ಕಾಗಿ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು ಜಾಮಿಯ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಈಗಾಗಲೇ ದೂರು ದಾಖಲಿಸಿದ್ದಾರೆ. ದ್ವೇಷ ಭಾಷಣ ಮಾಡಿರುವ ಹಾಗೂ ದ್ವೇಷ ಅಪರಾಧಕ್ಕೆ ಪ್ರಚೋದಿಸಿದ ಆರೋಪದಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಂಡು ಸಿ.ಟಿ.ರವಿಯನ್ನು ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.
ಇದನ್ನೂ ಓದಿ :
ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಸಿ.ಟಿ.ರವಿ ವಿರುದ್ಧ FIR – vishwanews24
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಹಗರಣದ ವಿರುದ್ಧದ ವಿದ್ಯಾರ್ಥಿಗಳು ಹಾಗೂ ಯುವಜನರ ಪ್ರತಿಭಟನೆ ಇಡೀ ದೇಶಾದ್ಯಂತ ಹಬ್ಬಿದೆ. ಎಲ್ಲೆಡೆ ಜನರು ಬೀದಿಗಿಳಿದು ಮೋದಿ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ರಾಜಧಾನಿ ದಿಲ್ಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ವಾರಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇವೆಲ್ಲದರಿಂದ ಮೋದಿ ಸರಕಾರ ಹಾಗೂ ಬಿಜೆಪಿ ಕಂಗೆಟ್ಟಿದೆ. ದೇಶದ ಉದ್ದಗಲಗಳಲ್ಲಿ ವೇಗವಾಗಿ ಹಬ್ಬುತ್ತಿರುವ ಯುವಜನರ ಆಂದೋಲನವನ್ನು ಹೇಗೆ ಹತ್ತಿಕ್ಕಬೇಕು ಎಂದು ಗೊತ್ತಾಗದೆ ಬಿಜೆಪಿ ಕಂಗಾಲಾಗಿದೆ. ಜನರಿಂದ ಬರುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಸಹಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಯಾವತ್ತೂ ಅನುಸರಿಸುವ ಮುಸ್ಲಿಮ್ ದ್ವೇಷ ಹಾಗೂ ಹಿಂದೂ ಮುಸ್ಲಿಮ್ ವಿಭಜನೆಯ ನೀತಿಯನ್ನೇ ಸಿ.ಟಿ.ರವಿ ಪುನಃ ಅನುಸರಿಸಿದ್ದಾರೆ. ಇನ್ನೊಂದು ಕಡೆ ಅವರದೇ ಪಕ್ಷದ ಮಾಜಿ ಸಂಸದ ಪ್ರತಾಪ್ ಸಿಂಹ ದಿಲ್ಲಿಯ ಜಂತರ್ ಮಂತರ್ ನಲ್ಲಿ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಅಂದರೆ ಈ ಬಿಜೆಪಿ ನಾಯಕರಿಗೆ ಗುಲಾಮರಂತೆ ಬಾಯಿ ಮುಚ್ಚಿಕೊಂಡು ಮತ ಚಲಾಯಿಸುವವರು ಮಾತ್ರ ಬೇಕು, ಆಳುವವರಿಗೆ ಸರಿಯಾದ ಪ್ರಶ್ನೆ ಕೇಳುವ ಜಾಗೃತ ಪ್ರಜೆಗಳು ಇವರಿಗೆ ಬೇಡವಾಗಿದ್ದಾರೆ ಎಂದು ಒಕ್ಕೂಟ ಟೀಕಿಸಿದೆ.
ಇದನ್ನೂ ಓದಿ :
ಬೆಳ್ತಂಗಡಿ: ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ಮರ; ಅದೃಷ್ಟವಶಾತ್ ಸವಾರ ಅಪಾಯದಿಂದ ಪಾರು – vishwanews24
