ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ವೈಭವದ ತೆರೆ – Vishwanews24
ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ವೈಭವದ ತೆರೆ – Vishwanews24
ಧರ್ಮಸ್ಥಳ: ರಾಜ್ಯದ ಲಕ್ಷಾಂತರ ಜನತೆಯ ಪಾಲಿನ ನಂಬಿಕೆಯ ಕ್ಷೇತ್ರ ಎನಿಸಿಕೊಂಡಿರುವ ಧರ್ಮಸ್ಥಳದಲ್ಲಿ ಶುಕ್ರವಾರ ಲಕ್ಷ ದೀಪೋತ್ಸವ ಸಂಭ್ರಮ ಸಂಪನ್ನಗೊಂಡಿದೆ.
ಲಕ್ಷಾಂತರ ಭಕ್ತರು ದೀಪೋತ್ಸವವನ್ನ ಕಣ್ತುಂಬಿಕೊಳ್ಳೋಕೆ ಮಂಜುನಾಥನ ಸನ್ನಿಧಿಯತ್ತ ಹೆಜ್ಜೆ ಹಾಕಿದ್ರು. ಗರ್ಭಗುಡಿಯಿಂದ ಹೊರಬರೋ ಮಂಜುನಾಥ ಸ್ವಾಮಿ ಬೆಳ್ಳಿ ರಥದಲ್ಲಿ ಕ್ಷೇತ್ರ ಸುತ್ತೋದನ್ನ ಕಂಡು ಭಕ್ತರು ಧನ್ಯರಾದರು. ಭಕ್ತಿಯಿಂದ ಕೈಮುಗಿದು ಮಂಜುನಾಥನನ್ನು ಆರಾಧಿಸೋಕೆ ಅಂತಾನೆ ವರ್ಷದಲ್ಲಿ ಕೋಟ್ಯಾಂತರ ಜನ್ರು ಧರ್ಮಸ್ಥಳಕ್ಕೆ ಭೇಟಿ ಕೊಡ್ತಾರೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರೋ ಧರ್ಮಸ್ಥಳ ಅನ್ನೋ ಈ ಕ್ಷೇತ್ರ ಇಂದಿಗೂ ಅದೆಷ್ಟೋ ಭಕ್ತರ ಪಾಲಿಗೆ ಕಷ್ಟಗಳನ್ನ ನಿವಾರಿಸೋ ಸಾಕ್ಷಾತ್ ದೈವತ್ವ ತುಂಬಿರೋ ಕ್ಷೇತ್ರವಾಗಿ ನಿಂತಿದೆ. ಇಂತಹ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಲಕ್ಷ ದೀಪೋತ್ಸವದ ಸಂಭ್ರಮ ಶುಕ್ರವಾರ ತಡ ರಥೋತ್ಸವದೊಂದಿಗೆ ಸಂಪನ್ನಗೊಂಡಿದೆ.
ಒಟ್ಟು ಐದು ದಿನಗಳ ಕಾಲ ನಡೆಯೋ ಈ ದೀಪೋತ್ಸವ ಸಂಭ್ರಮಕ್ಕೆ ಕೊನೆಯ ದಿನವಾದ ಶುಕ್ರವಾರ ಲಕ್ಷಾಂತರ ಭಕ್ತರು ಸಾಕ್ಷಿಯಾದ್ರು. ಕೊನೆಯ ದಿನ ಮಂಜುನಾಥ ಸ್ವಾಮಿಗೆ ಗೌರಿಮಾರುಕಟ್ಟೆ ಉತ್ಸವ ನಡೆಯತು. ಹೂ ಹಣ್ಣುಗಳಿಂದ ಸಿಂಗರಿಸಿದ ಬೆಳ್ಳಿ ರಥ ದೇವಸ್ಥಾನದ ಮುಂಭಾಗದಿಂದ ಹೊರಟು, ನೆರದಿದ್ದ ಲಕ್ಷ, ಲಕ್ಷ ಭಕ್ತರ ನಡುವೆ, ರಥಿಬೀದಿಯಾಗಿ ಗೌರಿಮಾರುಕಟ್ಟೆಗೆ ಸಾಗಿತು. ಉತ್ಸವದುದ್ದಕ್ಕೂ ನಾದ ಸ್ವರಗಳು, ವಾಲಗ, ಡೊಳ್ಳು ಕುಣಿತ, ಶಂಖದಾಸರು ಮತ್ತು ಕಹಳೆ, ವೀರಗಾಸೆಯರು, ಬ್ಯಾಂಡ ಸೆಟ್ಟುಗಳು ಸಾಥ್ ನೀಡಿದವು. ಆ ಮೂಲಕ ಇಡೀ ಧರ್ಮಸ್ಥಳವೇ ಭಕ್ತಿ ಭಾವದಲ್ಲಿ ಲೀನಾವಾಗುವಂತೆ ಮಾಡಿದರು. ಮುಖ್ಯದ್ವಾರದ ಎಡಬದಿಯ ಗೌರಿ ಮಾರುಕಟ್ಟೆಗೆ ತಲುಪಿದ ಶ್ರೀಸ್ವಾಮಿಯ ಉತ್ಸವ ಮೂರ್ತಿಗೆ ವಿಧ ವಿಧದ ದೀಪಗಳಿಂದ ಮಂಗಳಾರತಿ ನೇರವೇರಿಸಿ ಪೂಜಾ, ವಿಧ ವಿಧಾನಗಳನ್ನು ಪೂರೈಸಲಾಯಿತು.
ಕಾರ್ತಿಕ ಮಾಸದ ಈ ವಿಶೇಷ ಲಕ್ಷದೀಪ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದ್ರು. ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹಾಗೂ ಅವರ ಕುಟುಂಬಸ್ಥರ ಮಾರ್ಗದರ್ಶನದಲ್ಲಿ ನಡೆದ ಅಂತಿಮ ದಿನದ ಸಮವಸರಣ ಪೂಜೆಗೆ ನೂರಾರು ಭಕ್ತರು ಸಾಕ್ಷಿಯಾದರು. ಇನ್ನು ದೀಪೋತ್ಸವಕ್ಕೆ ಬರೋ ಭಕ್ತರನ್ನ ಆಕರ್ಷಿಸೋ ಉದ್ದೇಶದಿಂದ ಇಡೀ ಕ್ಷೇತ್ರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರನ್ನ ಆಕರ್ಷಿಸ್ತಿದೆ. ಹೀಗಾಗಿ ತಡರಾತ್ರಿಯವರೆಗೂ ಕ್ಷೇತ್ರದಲ್ಲಿ ಜನ ಸಂದಣಿ ಇರೋ ಕಾರಣದಿಂದ ನಿರಂತರ ಅನ್ನ ಸಂತರ್ಪಣೆಯು ನಡೆದಿದೆ. ಇನ್ನು ಕ್ಷೇತ್ರದಲ್ಲಿ ಮಂಜುನಾಥನ ದರ್ಶನ ಪಡೆಯೋ ಭಕ್ತರು ಇಲ್ಲಿನ ವೈಭವನ್ನ ಕಣ್ತುಂಬಿ ಕೊಳ್ಳೋ ಮೂಲಕ ಖುಷಿ ಪಡ್ತಿದ್ದಾರೆ. ದೂರದ ಊರಿನಿಂದಲೂ ಸಾವಿರಾರು ಜನರು ಕ್ಷೇತ್ರಕ್ಕೆ ಆಗಮಿಸಿದ್ದು, ಪೊಲೀಸರ ಜೊತೆ ಕ್ಷೇತ್ರದ ಸಿಬ್ಬಂದಿಯೂ ಭದ್ರತೆ ಕೆಲಸದಲ್ಲಿ ತೊಡಗಿದ್ರು. ಈ ಎಲ್ಲಾ ಅಚ್ಚುಕಟ್ಟಾದ ವ್ಯವಸ್ತೆ ಭಕ್ತರಲ್ಲಿ ಖುಷಿ ತಂದಿದ್ದು, ಹೊರ ಜಿಲ್ಲೆಯಷ್ಟೇ ಅಲ್ಲದೇ ಬೇರೆ ರಾಜ್ಯಗಳ ಭಕ್ತರು ಕೂಡ ಆಗಮಿಸಿ ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರರಾದರು.
