ನಮ್ಮೂರಲ್ಲೂ ನಾನು ರಾಮ ಮಂದಿರ ಕಟ್ಟಿಸ್ತಾ ಇದ್ದೇನೆ : ಸಿದ್ದರಾಮಯ್ಯ -Vishwanews24
ನಮ್ಮೂರಲ್ಲೂ ನಾನು ರಾಮ ಮಂದಿರ ಕಟ್ಟಿಸ್ತಾ ಇದ್ದೇನೆ : ಸಿದ್ದರಾಮಯ್ಯ -Vishwanews24
ಮೈಸೂರು, : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಮೂಲಕ ಜನರಿಗೆ ಬಿಜೆಪಿ ಪರ ‘ಸಿಂಪತಿ’ ಬರಲಿ ಅಂತ ಮಾಡುತ್ತಾ ಇದ್ದಾರೆ. ಅಂದರೆ ಇದು ಪಕ್ಷದ ಪ್ರಚಾರ ಅಷ್ಟೇ. ಆದರೆ ಜನರು ಶ್ರೀ ರಾಮನಿಗೆ ಮಂದಿರ ಕಟ್ಟಿಸ್ತಾ ಇದ್ದಾರೆ ಅಂತ ಹಣ ಕೊಡುತ್ತಾ ಇದ್ದಾರೆಯೇ ಹೊರತು ಬಿಜೆಪಿಗೆ ಅಲ್ಲ. ಅಯೋಧ್ಯೆಯಲ್ಲಿ ಮಾತ್ರವಲ್ಲ, ಪ್ರತೀ ಹಳ್ಳಿಗಳಲ್ಲೂ ಶ್ರೀ ರಾಮ ಮಂದಿರಗಳಿವೆ. ನಮ್ಮೂರಲ್ಲೂ ನಾನು ರಾಮ ಮಂದಿರ ಕಟ್ಟಿಸ್ತಾ ಇದ್ದೇನೆ. ಅದಕ್ಕಾಗಿ ಈಗಾಗಲೇ ಸಾರ್ವಜನಿಕರು ವಂತಿಗೆ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವ ಬಗ್ಗೆ ಲೆಕ್ಕ ಕೇಳಲು ಹಣ ಕೊಟ್ಟವರೇ ಆಗಬೇಕಿಲ್ಲ. ಅದು ಸಾರ್ವಜನಿಕ ಹಣವಾಗಿರುವುದರಿಂದ ಯಾರೂ ಕೂಡಾ ಲೆಕ್ಕ ಕೇಳಬಹುದು. ಈಗಲೇ ಸುಮಾರು 1,500 ಕೋಟಿ ರೂ. ಸಂಗ್ರಹಿಸಿದ್ದಾರೆ. ಈ ಹಿಂದೆಯೂ ಮಂದಿರದ ಹೆಸರಿನಲ್ಲಿ ತುಂಬಾ ಹಣ, ಇಟ್ಟಿಗೆ ಅಂತ ಸಂಗ್ರಹಿಸಿದ್ದರು. ಆದರೆ ಈ ಬಗ್ಗೆ ಲೆಕ್ಕ ಕೊಡದೇ ಇರುವುದರಿಂದ ಅದರಲ್ಲಿ ಭ್ರಷ್ಟಾಚಾರ ಆಗಿದೆ ಎಂದೇ ಅರ್ಥ. ಆದ್ದರಿಂದ ಇದೀಗ ಸಂಗ್ರಹಿಸಿರುವ ಹಣದ ಲೆಕ್ಕ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
