ನರೇಂದ್ರ ಮೋದಿಯವರಿಗಾಗಿ ಮತ ಹಾಕಿ , ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ’:ಸದಾನಂದ ಗೌಡ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು,  ‘ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದ್ದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ’ ಎಂದು ಡಿ.ವಿ.ಸದಾನಂದ ಗೌಡ ಅವರು ಜನರಲ್ಲಿ ಮನವಿ ಮಾಡಿದರು.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸೋಮವಾರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ನಾಗದೇವನಹಳ್ಳಿ ಎರಡನೇ ಹಂತದ ಜ್ಞಾನ ಭಾರತಿ ಬಿಡಿಎ ಲೇಔಟ್ ನಲ್ಲಿರುವ ಕೆವಿ ಆರ್ಕಿಡ್ಸ್ ಅಪಾರ್ಟ್ಮೆಂಟ್ ನಾಗರಿಕರೊಂದಿಗೆ ಸಂವಾದ ನಡೆಸಿದ ಅವರು, ‘ನೀವು ಸದಾನಂದ ಗೌಡರಿಗಾಗಿ ಮತ ಹಾಕಬೇಡಿ, ನರೇಂದ್ರ ಮೋದಿಯವರಿಗಾಗಿ ಮತ ಹಾಕಿ.’ ಎಂದು ಕೋರಿದರು.

ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಸರಣಿ ರಜೆಗಳಿವೆ ಎಂದು ಪ್ರವಾಸಕ್ಕೆ ಅಥವಾ ಹುಟ್ಟೂರಿಗೆ ತೆರಳಬೇಡಿ. ಮತದಾನ ಮಾಡಿದ ನಂತರ ನಿಮ್ಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ದೇಶದಲ್ಲಿ ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದ್ದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ ಎಂದು ಹೇಳಿದ್ದಾರೆ.

ಈ ಬಾರಿಯೂ ತಮಗೆ ಮತ ನೀಡಿ ಪುನರಾಯ್ಕೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಏಪ್ರಿಲ್ 18ರಂದು ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಕೃಷ್ಣ ಬೈರೇಗೌಡ ಅವರು ಕಣದಲ್ಲಿದ್ದಾರೆ.