ನಾನು ಮಾಡಿರುವ ಹೊಸ ಮನೆಗೆ ‘ನಿಮ್ಮ ಮನೆ’ ಎಂದು ಹೆಸರಿಡುವೆ ; ನಾನು ಮನೆಯಲ್ಲಿ ಇಲ್ಲ ಅಂದ್ರೂ ಯಾರು ಬೇಕಾದರೂ ಮನೆಗೆ ಬರಬಹುದು : ನಿಖಿಲ್ ಕುಮಾರಸ್ವಾಮಿ -Vishwanews24
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನನುಭವಿಸಿದ ಬಳಿಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಹಾಗೂ ಕ್ಷೇತ್ರದ ಜನರ ನಡುವಿನ ಸಂಬಂಧವನ್ನು ಇನ್ನಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ಮಂಡ್ಯದಿಂದ ಒಂದು ಕಿ.ಮೀ. ದೂರದಲ್ಲೇ ನಿಖಿಲ್ ತೋಟ ಖರೀದಿಸಿದ್ದಾರೆ.
ಇದೇ ವೇಳೆ ಈ ಬಗ್ಗೆ ಮಳವಳ್ಳಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಿಖಿಲ್ ಕುಮಾರಸ್ವಾಮಿಯವರು ಮಂಡ್ಯದಲ್ಲಿ ನಾನು ಮಾಡಿರುವ ಹೊಸ ಮನೆಗೆ ‘ನಿಮ್ಮ ಮನೆ’ ಎಂದು ಹೆಸರು ಇಡುವೆ ಅಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾನು ಮನೆಯಲ್ಲಿ ಇಲ್ಲ ಅಂದ್ರೂ ಯಾರು ಬೇಕಾದರೂ ಮನೆಗೆ ಬರಬಹುದು. 15 ದಿನದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.
ಮಂಡ್ಯ ಪ್ರವಾಸದ ಬಗ್ಗೆ ಜೆಡಿಎಸ್ ವರಿಷ್ಠರ ಜತೆ ಚರ್ಚೆಮಾಡಿದ್ದೇನೆ. ನನಗೆ ಮತಚಲಾಯಿಸಿದ ಮತದಾರರಿಗೆ ಧನ್ಯವಾದಗಳು. ಚುನಾವಣೆ ಫಲಿತಾಂಶ ಬಂದ ನಂತರ ನಿಖಿಲ್ ಸೋತಿದ್ರಿಂದ ಗಲಾಟೆ ಮಾಡಿದ್ದಾರೆಂದು ಯಾವುದೋ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆದಿದ್ದರು. ಆದರೆ ಆ ರೀತಿ ಬರೆಯುವ ಮುನ್ನ ಆ ಮಾಹಿತಿ ಸರಿ ಇದೆಯಾ ಇಲ್ಲವಾ ಎನ್ನುವುದನ್ನು ಪರಿಶೀಲನೆ ಮಾಡಿ. ಈ ಸಂಗತಿ ನನಗೆ ಬಹಳ ನೋವುಂಟು ಮಾಡಿದೆ. ನನ್ನ ಧೃತಿಗೆಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
