ನಾನು ಮಾತ್ರ ಬಿಜೆಪಿಗೆ, ಮೋದಿ ಸರ್ಕಾರಕ್ಕೆ ತಲೆಬಾಗುವುದಿಲ್ಲ : ಮಮತಾ ಬ್ಯಾನರ್ಜಿ -Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಕೋಲ್ಕತಾ: ನನ್ನನ್ನೂ ಜೈಲಿಗೆ ಅಟ್ಟಿದರೂ ನಾನು ಮಾತ್ರ ಬಿಜೆಪಿಗೆ, ಮೋದಿ ಸರ್ಕಾರಕ್ಕೆ ತಲೆಬಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವಿದ್ಯಾರ್ಥಿಗಳ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಮುಖ ಸಂಸ್ಥೆಗಳನ್ನು ನಿವೃತ್ತ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಅವರು ಸರ್ಕಾರದ “ಯೆಸ್‌ ಮೆನ್‌’ಗಳಾಗಿ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಭಿನ್ನಾಭಿಪ್ರಾಯದ ಧ್ವನಿಯನ್ನು ಮೌನಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿವೇಚನಾರಹಿತ ಶಕ್ತಿಯನ್ನು ಬಳಸುತ್ತಿದೆ.

ಕೇಂದ್ರ ಸರ್ಕಾರದ ವಿರುದ್ಧ ನನ್ನ ಧ್ವನಿ ಎತ್ತಿದ್ದಕ್ಕೆ ಅವರು ಬೇಕಿದ್ದರೆ ನನ್ನನ್ನು ಬಂಧಿಸಲಿ. ಆದರೆ ಯಾವುದೇ ಕಾರಣಕ್ಕೂ ನಾನು ಬಿಜೆಪಿಯ ಮುಂದೆ ತಲೆಬಾಗುವುದಿಲ್ಲ. ಈ ಮೂಲಕ ಕಾಶ್ಮೀರದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಹೊಣೆಗಾರಿಕೆಯೇ ಇಲ್ಲದ ನಿವೃತ್ತ ವ್ಯಕ್ತಿಗಳನ್ನು ಪ್ರಮುಖ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ಮಾಡಲಾಗಿದೆ ಎಂದು ಕಿಡಿಕಾರಿದರು.

ದೇಶವು ಅಧ್ಯಕ್ಷೀಯ ಸರ್ಕಾರದತ್ತ ಸಾಗುತ್ತಿದ್ದು, ಇಲ್ಲಿ ಪ್ರಜಾಪ್ರಭುತ್ವಕ್ಕೆ ಸ್ಥಳವೇ ಇಲ್ಲದಂತಾಗುತ್ತಿದೆ. ಕರ್ನಾಟಕದಲ್ಲಿ ಸರ್ಕಾರವನ್ನು ಉರುಳಿಸಲಾಯಿತು. ಆದರೆ ಅದರ ಬಗ್ಗೆ ಒಂದೇ ಒಂದು ಮಾತನ್ನಾಡಲಿಲ್ಲ. ಬಂಗಾಳದ ನಂತರದಲ್ಲಿ ಕೇಂದ್ರ ಸರ್ಕಾರವು ವಿಪಕ್ಷ ನಾಯಕರನ್ನು ಬೆದರಿಸುತ್ತಿದೆ ಅಥವಾ ಹಣದಿಂದ ಅವರನ್ನು ಕೊಂಡುಕೊಳ್ಳಲಾಗುತ್ತಿದೆ. ನಾವು ಅದರ ನೀತಿ ಮತ್ತು ಒಡಕು ರಾಜಕೀಯವನ್ನು ವಿರೋಧಿಸುತ್ತಿದ್ದೇವೆ ಎಂದು ಮಮತಾ ಹೇಳಿದರು.