ಪದೇ ಪದೇ ಅಕ್ರಮ ಮರಳು ಗಣಿ ನಡೆಸಿದರೆ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು : ಜಿಲ್ಲಾಧಿಕಾರಿ ಜಿ ಜಗದೀಶ್ -Vishwanews24
ಪದೇ ಪದೇ ಅಕ್ರಮ ಮರಳು ಗಣಿ ನಡೆಸಿದರೆ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು : ಜಿಲ್ಲಾಧಿಕಾರಿ ಜಿ ಜಗದೀಶ್ -Vishwanews24
ಕುಂದಾಪುರ : ಕೊರೊನಾ ಹಿನ್ನೆಲೆಯಲ್ಲಿ ಹಿನ್ನೆಡೆಯಾಗಿರುವ ಪೌತಿ ಅದಾಲತ್ ನ್ನು ಕೂಡಲೇ ಪುನರಾರಂಭಿಸಿ, ಮೂರು ತಿಂಗಳೊಳಗೆ ಫಲಾನುಭವಿಗಳಿಗೆ ದಾಖಲೆ ನೀಡಿ, ಪ್ರಕರಣ ಮುಕ್ತಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ 18 ವಿಭಾಗದ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರತಿ ತಿಂಗಳು ಎಲ್ಲಾ ತಾಲೂಕಿನಲ್ಲೂ ಪೌತಿ ಅದಾಲತ್ ನಡೆಸಲಾಗುತ್ತದೆ. ಆಕ್ಷೇಪ ಬಂದಲ್ಲಿ ತಹಸೀಲ್ದಾರ್ ವಿಚಾರಣೆ ನಡೆಸಿ ಆದೇಶ ಮಾಡುತ್ತಾರೆ. ಪಹಣೆ ಪತ್ರದ ಕಾಲಂ 3,9 ಹೊಂದಾಣಿಕೆ ಆಗದ 20 ಪ್ರಕರಣ ಜಿಲ್ಲೆಯಲ್ಲಿ ಬಾಕಿಯಿದ್ದು, ಆದ್ಯತೆ ಮೇಲೆ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ . ಸಾವಿರಕ್ಕೂ ಹೆಚ್ಚು 11 ಇ ನಕ್ಷೆ ಅರ್ಜಿ ವಿಲೇವಾರಿಗೆ ಬಾಕಿ ಇದ್ದು , ಒಂದು ತಿಂಗಳೊಳಗೆ ಎಲ್ಲಾ ಪ್ರಕರಣಗಳನ್ನು ಮುಗಿಸಲು ಸೂಚಿಸಲಾಗಿದೆ ಎಂದರು.
ಆಶ್ರಯ ಮನೆ ನಿವೇಶನಕ್ಕೆ ಹಾಗೂ ಘನ ತ್ಯಾಜ್ಯ ವಿಲೇವಾರಿ ಗೆ ಗ್ರಾಮ ಪಂಚಾಯತಿಗಳಲ್ಲಿ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಅರ್ಹ ಫಲಾನುಭವಿಗಳಿಗೆ ಪಿಂಚಣಿ ದೊರಕಬೇಕು ಎನ್ನುವ ಸದುದ್ದೇಶದಿಂದ ಒಂದು ತಿಂಗಳ ಒಳಗೆ ಅರ್ಹ ಫಲಾನುಭವಿಗಳ ಹಾಗೂ ಒಂದು ವಾರದಲ್ಲಿ ಅನರ್ಹ ಪಿಂಚಣಿ ಫಲಾನುಭವಿಗಳ ಪತ್ತೆ ಮಾಡಿ, ಪಟ್ಟಿ ನೀಡಬೇಕು. ಕರ್ತವ್ಯ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಪಿಂಚಣಿ ಹಣದ ಜೊತೆ ಬಡ್ಡಿಯನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಯೋಜನೆ ಪೈಲಟ್ ಹಂತದಲ್ಲಿ ಜ. 30 ರಂದು ಉಡುಪಿ ಜಿಲ್ಲೆಯಲ್ಲಿ ನಡೆಯಲ್ಲಿದೆ. ಜಿಲ್ಲಾಧಿಕಾರಿ, ಅವರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ಎಲ್ಲ ತಹಶೀಲ್ದಾರರು ಸರ್ಕಾರದ ಯೋಜನೆಯಂತೆ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ನಡೆಯಲಿದೆ. ಬೆಳಗ್ಗೆಯಿಂದ ಸಂಜೆ ತನಕ ಗ್ರಾಮದಲ್ಲಿದ್ದು, ಜನರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ. ಇದರ ಸಾಧಕ-ಬಾಧಕದ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿ ನಡೆಸುವ ಕೆಂಪು ಕಲ್ಲು ಗಣಿಗಾರಿಕೆ ಹಾಗೂ ಸರ್ಕಾರಿ ಜಾಗದಲ್ಲಿ ಗಣಿಗಾರಿಕೆಗೆ ಅವಕಾಶವಿಲ್ಲ. ಅಕ್ರಮ ಹಾಗೂ ಅತಿಕ್ರಮ ಗಣಿ ವಿರುದ್ಧ ನಿರ್ದಾಕ್ಷಣ್ಯ ಕ್ರಮಕ್ಕೆ ಸೂಚಿಸಲಾಗಿದೆ. ದಾಖಲೆ ಸರಿ ಇರುವ ಪಟ್ಟಾ ಜಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅನುಮತಿ ಪಡೆದಿರುವ 50 ಜಲ್ಲಿ ಕ್ರಷರ್ ಇದೆ. ಅನುಮಿತಿ ಇಲ್ಲದ ಕಲ್ಲು ಕ್ವಾರಿ ಹಾಗೂ ಕ್ರಷರ್ ಗಳನ್ನು ನಿಲ್ಲಿಸಲು ಸೂಚಿಸಲಾಗಿದೆ. ಪದೇ ಪದೇ ಅಕ್ರಮ ಮರಳು ಗಣಿ ನಡೆಸಿದರೆ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಹಸೀಲ್ದಾರ್ ಆನಂದಪ್ಪ ಹೆಚ್.ನಾಯ್ಕ್ ಇದ್ದರು
