ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರ್ಯ ಕಾಶ್ಮೀರವನ್ನಾಗಿ ಘೋಷಣೆ ಮಾಡಿ :ಕಮಲ್ ಹಾಸನ್ – Vishwanews24

Featured, ರಾಷ್ಟ್ರ ನ್ಯೂಸ್
ಚೆನ್ನೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರ್ಯ ಕಾಶ್ಮೀರವನ್ನಾಗಿ ಘೋಷಣೆ ಮಾಡಿ, ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆ ಮಾಡಬೇಕು ಎಂದು ಖ್ಯಾತ ನಟ ಹಾಗೂ ಎಂಎನ್ಎಂ ಪಕ್ಷದ ಸಂಸ್ಛಾಪಕ ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಕಮಲ್ ಹಾಸನ್ ಅವರು, ಭಾರತ ಮತ್ತು ಪಾಕಿಸ್ತಾನದ ರಾಜಕಾರಣಿಗಳು ಜವಾಬ್ದಾರಿತನದಿಂದ ವರ್ತಿಸಿದರೆ, ಖಂಡಿತಾ ಪುಲ್ವಾಮ ಉಗ್ರ ದಾಳಿಯಂತಹ ಘಟನೆಗಳು ನಡೆಯುವುದಿಲ್ಲ. ಗಡಿ ಪ್ರದೇಶದಲ್ಲಿ ಹಿಂಸಾಚಾರ ತಲೆ ಎತ್ತುವುದಿಲ್ಲ ಎಂದು ಹೇಳಿದರು.
ಆಜಾದ್ ಕಾಶ್ಮೀರದ ರೈಲುಗಳಲ್ಲಿ ಜಿಹಾದಿಗಳ ಫೋಟೊವನ್ನಿಟ್ಟು ಅವರನ್ನು ಹೀರೊಗಳಂತೆ ಮೆರೆಸುತ್ತಾರೆ. ಇದೊಂದು ಮೂರ್ಖತನದ ಕೆಲಸ. ಇತ್ತ ಭಾರತವೂ ಇಂಥದ್ದೇ ಮೂರ್ಖತನದ ಕೆಲಸ ಮಾಡುತ್ತದೆ. ಇದು ಸರಿಯಲ್ಲ, ಭಾರತ ಇದಕ್ಕಿಂತ ಉತ್ತಮ ದೇಶ ಎಂದು ಸಾಬೀತು ಮಾಡಬೇಕಾದರೆ ನಾವು ಈ ರೀತಿ ವರ್ತಿಸಬಾರದು. ಇಲ್ಲಿಯೇ ರಾಜಕೀಯ ಆರಂಭವಾಗುವುದು. ರಾಜಕೀಯದ ಹೊಸ ರೀತಿ ಆರಂಭವಾಗುವುದು ಎಂದಿದ್ದಾರೆ.

ನನ್ನ ಪ್ರಕಾರ ಕಣಿವೆ ರಾಜ್ಯದಲ್ಲಿ ಜನಾಭಿಪ್ರಾಯದ ಸಂಗ್ರಹಣ ಅನಿವಾರ್ಯವಾಗಿದೆ. ಅಲ್ಲಿನ ಜನರ ಆಶೋತ್ತರಗಳಿಗೆ ಕೇಂದ್ರ ಸರ್ಕಾರ ತುರ್ತಾಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳಿವೆ. ಪುಲ್ವಾಮ ಉಗ್ರ ದಾಳಿಯಲ್ಲಿ ಸೈನಿಕರ ಸಾವು ನಿಜಕ್ಕೂ ನನಗೆ ಅತೀವ ನೋವು ತಂದಿದೆ. ಸೈನಿಕರು ಕಾಶ್ಮೀರಕ್ಕೆ ಸಾಯಲೆಂದೇ ಹೋಗುತ್ತಾರೆಯೇ..? ಇದಕ್ಕೆ ಪರಿಹಾರವೇ ಇಲ್ಲವೇ.. ಸರ್ಕಾರವೇಕೆ ಅಲ್ಲಿನ ಜನಗಳ ಜನಾಭಿಪ್ರಾಯಕ್ಕೆ ಹಿಂದೇಟು ಹಾಕುತ್ತಿದೆ ಎಂಬುದು ತಮಗೆ ತಿಳಿಯುತ್ತಿಲ್ಲ ಎಂದು ಹೇಳಿದರು.
ಅಂತೆಯೇ ಗಡಿಯಲ್ಲಿ ಸೈನಿಕರು ಸತ್ತರೆ, ಉಭಯ ದೇಶಗಳ ರಾಜಕಾರಣಿಗಳು ಸಂಯಮದಿಂದ ವರ್ತಿಸಬೇಕು. ಅದನ್ನು ಬಿಟ್ಟು ಪ್ರಚೋಧನಾತ್ಮಕ ಹೇಳಿಕೆಗಳನ್ನು ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಪಿಒಕೆಯನ್ನು ಸ್ವತಂತ್ರ್ಯ ಕಾಶ್ಮೀರವಾಗಿ ಘೋಷಣೆ ಮಾಡಿ ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದಲ್ಲಿ ಸರ್ಕಾರ ಜನಾಭಿಪ್ರಾಯ ಸಂಗ್ರಹಣೆಗೆ ಮುಂದಾಗಬೇಕು. ಅವರ ಆಶೋತ್ತರಗಳಿಗೆ ಸ್ಪಂದಿಸಿ ಹೊಸ ರಾಜಕೀಯ ವ್ಯವಸ್ಛೆ ಮತ್ತು ಹೊಸ ಸಂಸ್ಕೃತಿಯನ್ನು ಬೆಳಸಬೇಕು ಎಂದು ಹೇಳಿದರು.