ಪುತ್ತೂರು : ಗಡಿಭದ್ರತಾ ಪಡೆಗೆ ಆಯ್ಕೆಯಾದ ಪುತ್ತೂರಿನ ಇಬ್ಬರು ಯುವತಿಯರು -Vishwanews24

Featured, ದಕ್ಷಿಣ ಕನ್ನಡ

ಪುತ್ತೂರು : ಗಡಿಭದ್ರತಾ ಪಡೆಗೆ ಆಯ್ಕೆಯಾದ ಪುತ್ತೂರಿನ ಯುವತಿಯರು -Vishwanews24

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಅವಿಭಜಿತ ಪುತ್ತೂರು ತಾಲೂಕಿನ ಇಬ್ಬರು ತರುಣಿಯರು ದೇಶ ಸೇವೆಯ ಕಾರ್ಯಕ್ಕೆ ಮುಂದಾಗಿದ್ದು, ಗಡಿಭದ್ರತಾ ಪಡೆ (ಬಿಎಸ್‌ಎಫ್‌)ಗೆ ಆಯ್ಕೆಯಾಗಿದ್ದಾರೆ.

ಪುತ್ತೂರು ಹೊರವಲಯದ ಬಲ್ನಾಡಿನ ಪರಜಾಲ್‌ ದೇವಸ್ಯದ ರಮ್ಯಾ ಮತ್ತು ಕಡಬ ತಾಲೂಕು ವ್ಯಾಪ್ತಿಯ ಕಾಣಿಯೂರಿನ ಯೋಗಿತಾ ಅವರೇ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವ ಧೀರ ವನಿತೆಯರು. ಇವರಿಬ್ಬರೂ ಏಪ್ರಿಲ್‌ 1ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ರಮ್ಯಾ ಅವರು ಬಲ್ನಾಡಿನ ಪದ್ಮಯ್ಯ ಗೌಡ ಮತ್ತು ತೇಜವತಿ ದಂಪತಿಗಳ ಪುತ್ರಿ. ಬಲ್ನಾಡ್‌ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಈಕೆ, ಪುತ್ತೂರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ ಪಡೆದಿದ್ದು, ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಲ್ಲಿ ಎನ್‌ಸಿಸಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ರಮ್ಯಾ, ಇದೀಗ ಸೇನಾ ಕರ್ತವ್ಯಕ್ಕೆ ಹೊರಟು ನಿಂತಿದ್ದಾರೆ.

ಇದನ್ನೂ ಓದಿ : ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದ್ದು, ಅವುಗಳನ್ನು ಕಿತ್ತೆಸೆಯಬೇಕಿದೆ : ಈಶ್ವರ ಖಂಡ್ರೆ -Vishwanews24

ಕಾಣಿಯೂರು ಗ್ರಾಮದ ಮಲೆಕೆರ್ಚಿ ಮೇದಪ್ಪ ಗೌಡ ಮತ್ತು ದೇವಕಿ ದಂಪತಿಗಳ ಪುತ್ರಿಯಾದ ಯೋಗಿತಾ ಎಂ. ಬೊಬ್ಬೆಕೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಕಾಣಿಯೂರಿನಲ್ಲಿ ಪ್ರೌಢಶಿಕ್ಷಣ, ನಿಂತಿಕಲ್‌ನಲ್ಲಿ ಪಿಯು ಶಿಕ್ಷಣ ಪಡೆದಿದ್ದಾರೆ. ಮಂಗಳೂರಿನ ವಿವಿ ಕಾಲೇಜಿನಲ್ಲಿ ಪದವಿ ಪಡೆದು, ಕೊಣಾಜೆಯ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಮಾರ್ಚ್ 30ರಂದು ಕಾಣಿಯೂರಿನಲ್ಲಿ ಯೋಗಿತಾಳಿಗೆ ಗ್ರಾಮಸ್ಥರಿಂದ ಗೌರವಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ.

ಯುವತಿಯರಿಗೆ ಬಿ.ವೈ ವಿಜಯೇಂದ್ರ ಅಭಿನಂದನೆ ಸಲ್ಲಿಸಿದ್ದು, ಹೆಣ್ಣು ಅಬಲೆಯಲ್ಲ, ಆಕೆಯ ಸಾಮರ್ಥ್ಯಕ್ಕೆ ತಕ್ಕ ಪ್ರೋತ್ಸಾಹ ಮತ್ತು ಅವಕಾಶ ದೊರೆತಾಗ ಅಸಾಧ್ಯ ಯಾವುದೂ ಇಲ್ಲ. ನಮ್ಮ ದಕ್ಷಿಣ ಕನ್ನಡದ ಪುತ್ತೂರಿನ ಹೆಮ್ಮೆಯ ಪ್ರತಿಭೆಗಳಾದ ಕಾಣಿಯೂರಿನ ಕುಮಾರಿ ಯೋಗಿತಾ ಹಾಗೂ ಬಲ್ನಾಡಿನ ಕುಮಾರಿ ರಮ್ಯಾ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದು, ಸ್ತ್ರೀಶಕ್ತಿಗೆ ನಿದರ್ಶನವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ರಮೇಶ್ ಜಾರಕಿಹೊಳಿ ಅವರ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲು ಮಾಡಿಕೊಳ್ಳಬೇಕು : ಸಿದ್ದರಾಮಯ್ಯ ಆಗ್ರಹ -Vishwanews24