ಪ್ರತಿಷ್ಠಿತ ‘ಮಾಸ್ಟರ್ ಶೆಫ್ ಇಂಡಿಯಾ’ ರಿಯಾಲಿಟಿ ಶೋ ಗೆದ್ದ ಮಂಗಳೂರಿನ ಮುಹಮ್ಮದ್ ಆಶಿಕ್ – vishwanews24

Featured, ದಕ್ಷಿಣ ಕನ್ನಡ

ಪ್ರತಿಷ್ಠಿತ ‘ಮಾಸ್ಟರ್ ಶೆಫ್ ಇಂಡಿಯಾ’ ರಿಯಾಲಿಟಿ ಶೋ ಗೆದ್ದ ಮಂಗಳೂರಿನ ಮುಹಮ್ಮದ್ ಆಶಿಕ್

ಮಂಗಳೂರು: ‘ಸೋನಿ ಲೈವ್’ ಓಟಿಟಿ ಪ್ಲಾಟ್ ಫಾರ್ಮ್ ಮುಂಬಯಿನಲ್ಲಿ ಆಯೋಜಿಸಿದ ‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಮಂಗಳೂರಿನ 24ರ ಹರೆಯದ ಯುವಕ ಮುಹಮ್ಮದ್ ಆಶಿಕ್ ವಿಜೇತರಾಗಿದ್ದಾರೆ. ಫೈನಲ್ ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಒಬ್ಬರಾಗಿದ್ದ ಮುಹಮ್ಮದ್ ಆಶಿಕ್, ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿಯನ್ನು ತನ್ನದಾಗಿಸಿವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಸ್ಪರ್ಧೆಯ ಅಂತಿಮ ಸಂಚಿಕೆ ಪ್ರಸಾರವಾಗಿದ್ದು, ಅದರಲ್ಲಿ ಆಶಿಕ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ದಕ್ಷಿಣ ಕನ್ನಡ.ಜಿಲ್ಲೆಯ ಯುವಕನೊಬ್ಬ ಇದೇ ಪ್ರಥಮ ಬಾರಿಗೆ ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜಯಿಯಾದ ಹಿರಿಮೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಈ ಸ್ಪರ್ಧೆಯಲ್ಲಿ ವಿಜೇತರಾದ ಮೂಲ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆಯೂ ಆಶಿಕ್ ಅವರದ್ದಾಗಿದೆ. ಮಂಗಳೂರಿನ ಜಪ್ಪು ಮಹಾಕಾಳಿಪಡ್ಪು ನಿವಾಸಿ ಅಬ್ದುಲ್ ಖಾದರ್- ಸಾರಮ್ಮ ದಂಪತಿಯ ಏಕೈಕ ಪುತ್ರರಾಗಿರುವ ಮುಹಮ್ಮದ್ ಆಶಿಕ್‌ ಗೆ ಬಾಲ್ಯದಿಂದಲೇ ಹಲವು ಬಗೆಯ ಅಡುಗೆ ತಯಾರಿಯಲ್ಲಿ ಆಸಕ್ತಿಯಿತ್ತು. ಹೊಟೇಲ್ ಮ್ಯಾನೇಜ್ ಮೆಂಟ್ ಕಲಿಯ ಬೇಕೆಂಬ ಬಯಕೆಯಿತ್ತು. ಆದರೆ ಮನೆಯ ಆರ್ಥಿಕ ಸ್ಥಿತಿಗತಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಆರ್ಥಿಕ ಸಮಸ್ಯೆ ಪರಿಹರಿಸಿಕೊಂಡು ಸಾಧಿಸುವ ಛಲ ಆಶಿಕ್ ಅವರಲ್ಲಿತ್ತು. ಹಾಗಾಗಿ ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ತನ್ನ ಮನೆಯಲ್ಲೇ ಶುಚಿ- ರುಚಿಯಾದ ಹೊಸ ಶೈಲಿಯ, ವಿಶಿಷ್ಟ ಸ್ವಾದದ ಆಹಾರಗಳನ್ನು ತಯಾರಿಸಿ ಕೊಡಲಾರಂಭಿಸಿದರು. ಅದರ ಜತೆಗೆ ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳ ಸಂದರ್ಭ ‘ಸ್ಟಾಲ್’ ಹಾಕಿ ವ್ಯಾಪಾರ ಮಾಡುತ್ತಿದ್ದರು.

ಕುಂದಾಪುರ : ಮೂರು ಮುತ್ತು ಖ್ಯಾತಿಯ ರಂಗಕಲಾವಿದ ಅಶೋಕ್ ಶ್ಯಾನುಭಾಗ್ ಇನ್ನಿಲ್ಲ – vishwanews24

ಆಹಾರವಲ್ಲದೆ ಕುಲ್ಕಿ ಶರ್ಬತ್ ಸಹಿತ ಬೇರೆ ಬೇರೆ ಪಾನೀಯಗಳನ್ನು ಕೂಡಾ ಮಾರಾಟ ಮಾಡತೊಡಗಿದರು. ಮಂಗಳೂರು ನಗರದ ಕಾಸ್ಸಿಯಾ ಮತ್ತು ರೊಜಾರಿಯೋ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತ ಮುಹಮ್ಮದ್ ಆಶಿಕ್ ದ್ವಿತೀಯ ಪಿಯುಸಿ ತರಗತಿ ತೇರ್ಗಡೆ ಹೊಂದಿದ ಬಳಿಕ ಶಿಕ್ಷಣ ಮುಂದುವರಿಸಲಾಗದೆ ಮಂಗಳೂರಿನ ಫಿಝಾ ಮಾಲ್‌ನ ರೆಡಿಮೇಡ್ ಶಾಪ್ ಒಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡ ತೊಡಗಿದರು. ಆದರೆ ಮನಸ್ಸೆಲ್ಲಾ ಅಹಾರ ತಯಾರಿ ಅಥವಾ ಅಡುಗೆ ಮನೆಯಲ್ಲೇ ಇತ್ತು. ಈತನ ಪಾಕ ಕಲೆಯನ್ನು ಗುರುತಿಸಿದ ಸಂಬಂಧಿಕರೇ ಆದ ಬಂಟ್ವಾಳದ ಮುಹಮ್ಮದ್ ಅಲಿ ಎಂಬವರು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು.ಅದರಂತೆ ತನ್ನ 20ರ ಹರೆಯದಲ್ಲೇ ಮಂಗಳೂರಿನ ಬಲ್ಮಠದಲ್ಲಿ ‘ಕುಲ್ಕಿ ಹಬ್’ ತೆರೆದ ಮುಹಮ್ಮದ್ ಆಶಿಕ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಪೂರ್ಣಪ್ರಮಾಣದಲ್ಲಿ ‘ಶೆಫ್ ’ ಆಗಲು ನಿರ್ಧರಿಸಿ ರಾತ್ರಿ ಹಗಲೆನ್ನದೆ ಶ್ರಮಿಸಿದ್ದರು. ಹಾಗೇ ‘ ಶೆಫ್’ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಹೈದರಾಬಾದ್, ಬೆಂಗಳೂರಿನಲ್ಲಿ ನಡೆದ ‘ ಶೆಫ್ ’ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಮಂಗಳೂರಿನಲ್ಲಿ ನಡೆದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಕಳೆದ ಬಾರಿ ‘ಸೋನಿ ಟಿವಿ’ ಸಂಸ್ಥೆಯವರು ಆಯೋಜಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡರೂ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಮುಹಮ್ಮದ್ ಆಶಿಕ್ ಧೃತಿಗೆಡಲಿಲ್ಲ. ಈ ಬಾರಿ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ದೇಶಾದ್ಯಂತ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು. ಬಳಿಕ ಹಿಂದಿರುಗಿ ನೋಡದ ಅವರು ಇದೀಗ ‘ಮಾಸ್ಟರ್ ಶೆಫ್ ಇಂಡಿಯಾ’ ವಿಜೇತರಾಗಿದ್ದಾರೆ.

Leave a Reply