ಪ್ರವಾಹ ಬಂದು 15 ದಿನ ಕಳೆದರೂ ಕೇಂದ್ರದಿಂದ ಒಂದು ನಯಾ ಪೈಸೆ ಬಂದಿಲ್ಲ : ಸಿದ್ದರಾಮಯ್ಯ ಕಿಡಿ -Vishwanews24
ಹುಬ್ಬಳ್ಳಿ : ಪ್ರವಾಹ ಬಂದು 15 ದಿನ ಕಳೆದರೂ ಕೇಂದ್ರದಿಂದ ಒಂದು ನಯಾ ಪೈಸೆ ಬಂದಿಲ್ಲ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಒನ್ ಮ್ಯಾನ್ ಶೋ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ ಮಂತ್ರಿ ಮಂಡಲ ವಿಸ್ತರಣೆಯಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬಹುಶಃ ಮಂತ್ರಿ ಮಂಡಲ ಇಲ್ಲದೇ ಇಷ್ಟು ದಿನ ಸರ್ಕಾರ ಇಲ್ಲದೆ ಇದ್ದದ್ದು ಮೊದಲು ಬಾರಿಯಾಗಿದೆ. ಯಡಿಯೂರಪ್ಪ ಪ್ರಧಾನಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಪ್ರಧಾನಿ ಹಣ ಕೊಡುತ್ತೀನಿ ಎಂದು ಎಲ್ಲಿ ಆದರೂ ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರಿಗೆ ಸಿಬಿಐ ಎಂದರೆ ವಾಕರಿಕೆ ಇತ್ತು. ಈಗ ಇದ್ದಕ್ಕಿದ್ದಂತೆ ಅವರ ಸರ್ಕಾರ ಬಂದಾಕ್ಷಣ ಸಿಬಿಐ ಮೇಲೆ ವ್ಯಾಮೋಹ ಬಂದಿದೆ. ನಮ್ಮ ಪೊಲೀಸರಿಂದ ತನಿಖೆ ಮಾಡಿಸಬಹುದಿತ್ತು. ಆದರೆ ಸಿಬಿಐಯನ್ನು ದುರ್ಬಳಕೆ ಮಾಡಲು ಹೊರಟಿದ್ದಾರೆ. ಆಪರೇಷನ್ ಕಮಲವನ್ನು ಸಿಬಿಐಗೆ ಕೊಡಲಿ. ಅವರು ಅದನ್ನು ಮಾಡಲ್ಲ. ಅವರು ಆ ರೀತಿ ಮಾಡಿದರೆ ನನಗೆ ಸಂತೋಷವಾಗುತ್ತದೆ ಎಂದರು.
