ಬಡವರಿಗಾಗಿ ಇರುವ ನಮ್ಮ ಸರ್ಕಾರದ ಯೋಜನೆಗಳು ಎಲ್ಲ ವರ್ಗಗಳನ್ನು ಯಾವುದೇ ಧರ್ಮದ ಆಧಾರವಿಲ್ಲದೆ ತಲುಪುತ್ತಿದೆ : ಪ್ರಧಾನಿ ಮೋದಿ -Vishwanews24
ಬಡವರಿಗಾಗಿ ಇರುವ ನಮ್ಮ ಸರ್ಕಾರದ ಯೋಜನೆಗಳು ಎಲ್ಲ ವರ್ಗಗಳನ್ನು ಯಾವುದೇ ಧರ್ಮದ ಆಧಾರವಿಲ್ಲದೆ ತಲುಪುತ್ತಿದೆ : ಪ್ರಧಾನಿ ಮೋದಿ -Vishwanews24
ಆಲಿಗಢ: ಇಂದು ರಾಷ್ಟ್ರವು ಧರ್ಮವು ಹೊರತಾದ ಹಾದಿಯಲ್ಲಿದ್ದು, ಜನರ ಸಾಂವಿಧಾನಿಕ ಹಕ್ಕುಗಳು ಮತ್ತು ಅವರ ಭವಿಷ್ಯ ಹಾಗೂ ಯಾವುದೇ ಸಮುದಾಯಗಳು ಹಿಂದೆ ಉಳಿದಿಲ್ಲ ಎಂದು ಭರವಸೆ ನೀಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಆಲಿಗಢ ಮುಸ್ಲಿಂ ಯೂನಿವರ್ಸಿಟಿ ಶತಮಾನೋತ್ಸವ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಡವರಿಗಾಗಿ ಇರುವ ನಮ್ಮ ಸರ್ಕಾರದ ಯೋಜನೆಗಳು ಎಲ್ಲ ವರ್ಗಗಳನ್ನು ಯಾವುದೇ ಧರ್ಮದ ಆಧಾರವಿಲ್ಲದೆ ತಲುಪುತ್ತಿದೆ. ರಾಷ್ಟ್ರದ ಏಳಿಗೆ ಮತ್ತು ಅಭಿವೃದ್ಧಿ ವಿಚಾರ ಬಂದಾಗ ನಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಅಭಿವೃದ್ಧಿಯೆಡೆಗೆ ಗಮನ ನೀಡುತ್ತೇವೆಂಬ ಭರವಸೆ ನೀಡಿದರು.
ಯಾವುದೇ ಪಕ್ಷಪಾತವಿಲ್ಲದೆ ದೇಶದ ಎಲ್ಲಾ ನಾಗರಿಕರು ಅನುಕೂಲವನ್ನು ಪಡೆಯುವ ಹಾದಿಯಲ್ಲಿ ಇಂದು ದೇಶವಿದೆ. ಧರ್ಮ ಕಾರಣದಿಂದ ಯಾರೊಬ್ಬರು ಸಹ ಹಿಂದೆ ಉಳಿಯದ ಹಾದಿಯಲ್ಲಿ ನಾವಿದ್ದೇವೆ. ಎಲ್ಲರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
ನಾವು ಯಾವುದೇ ಧರ್ಮದಲ್ಲಿ ಜನಿಸಿರಲಿ, ರಾಷ್ಟ್ರೀಯ ಗುರಿಗಳೊಂದಿಗೆ ನಮ್ಮ ಆಸೆಗಳನ್ನು ಯಾವ ರೀತಿ ಹೊಂದಿಸುತ್ತೇವೆ ಎಂಬುದು ಮುಖ್ಯವಾಗಿದೆ. ಸಮಾಜದಲ್ಲಿ ಸೈದ್ಧಾಂತಿಕ ಭಾಗಗಳಿರಬಹುದು ಆದರೆ, ಅಭಿವೃದ್ಧಿ ಅಂತ ಬಂದಾಗ ಎಲ್ಲವೂ ಕೂಡ ಅಧೀನವಾಗಿ ಉಳಿಯುತ್ತದೆ. ರಾಷ್ಟ್ರ ಅಂತಾ ಬಂದಾಗ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಮಾತಿಲ್ಲ ಎಂದು ಪ್ರಧಾನಿ ತಿಳಿಸಿದರು.
ಎಎಮ್ಯು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸೃಷ್ಟಿಸಿದೆ. ಹೀಗಾಗಿಯೇ ನಾನಿಂದು ಇಲ್ಲಿಗೆ ಬಂದಿದ್ದೇನೆ. ಹೋರಾಟಗಾರರಲ್ಲಿಯೂ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದರೂ ಸಹ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಒಗ್ಗೂಡಿದರು. ಸ್ವಾತಂತ್ರ್ಯ ಅವರನ್ನು ಒಂದುಗೂಡಿಸಿತು. ಹೀಗಾಗಿ ನಾವೆಲ್ಲ ಒಟ್ಟಾಗಿ ನವ ಭಾರತಕ್ಕಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
