ಬಿಜೆಪಿ ಸರ್ಕಾರ ನಡೆಸಲು ಅನರ್ಹವಾಗಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇದೆ, ಕಾಂಗ್ರೆಸ್‌ನ್ನುಅವಮಾನ ಮಾಡುವುದು ತಪ್ಪು , ಮುಂದಿನ ದಿನಗಳಲ್ಲಿ ನಾವು ಮತ್ತೇ ಪುಟಿದೇಳುತ್ತೇವೆ: ರಮಾನಾಥ ರೈ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : “ವಿರೋಧ ಪಕ್ಷದಲ್ಲಿರಲು ಕಾಂಗ್ರೆಸ್ ನಾಲಾಯಕ್” ಎಂಬ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆಗೆ ಪತ್ರಿಕ್ರಿಯೆ ನೀಡಿದ ಮಾಜಿ ಸಚಿವ ರಮಾನಾಥ ರೈ “ಬಿಜೆಪಿ ನಾಲಾಯಕ್” ಎಂದು ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಯಾರಿಗೆ ಸಾಮಾಜಿಕ ನ್ಯಾಯದಲ್ಲಿ ವಂಚನೆ ಮಾಡಲಾಗುವುದೋ ಅವರ ಪರವಾಗಿ ಕಾಂಗ್ರೆಸ್‌ ಎಂದಿಗೂ ನಿಂತಿದೆ. ನಾವು ಸೋತಿದ್ದೇವೆ ಪುನಃ ಅಧಿಕಾರ ಪಡೆದಿದ್ದೇವೆ. ಕಾಂಗ್ರೆಸ್‌ ಅವಿನಾಶವಾದ ಪಕ್ಷ. ಕಾಂಗ್ರೆಸ್‌ ಜಿಲ್ಲೆಯಲ್ಲಿ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ” ಎಂದು ತಿಳಿಸಿದ್ದಾರೆ.

“ಬಿಜೆಪಿ ಸರ್ಕಾರ ನಡೆಸಲು ಅನರ್ಹವಾಗಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇದೆ. ಬಳ್ಳಾರಿಯಲ್ಲಿನ 60% ಮೀಸಲು ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಯಾರು ಜೈಲಿನಲ್ಲಿ ಇದ್ದರು ಎಂದು ಎಲ್ಲರಿಗೆ ತಿಳಿದಿರುವ ವಿಚಾರ. ಲೋಕಾಯುಕ್ತವು ಈ ಬಗ್ಗೆ ಕ್ರಮ ತೆಗೆದುಕೊಂಡಿದೆ. ಆದರೆ ಜೈಲಿಗೆ ಹೋದವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ” ಎಂದು ಟೀಕೆ ಮಾಡಿದರು.

“ಕಾಂಗ್ರೆಸ್ ನಿರುದ್ಯೋಗಿ ಎಂದು ಬಿಜೆಪಿ ಹೇಳಿಕೊಂಡಿದೆ, ಆದರೆ ಈ ಜನರಿಗೆ ಉದ್ಯೋಗ ನೀಡಿದವರು ಯಾರು ಎಂದು ನಾವು ತಿಳಿಯಬೇಕು. ಅವರಿಗೆ ಆಪರೇಷನ್‌ ಕಮಲ, ಹಣದ ಶಕ್ತಿಮತ್ತು ಕೇಂದ್ರದಲ್ಲಿ ಅಧಿಕಾರ ಇರುವುದರಿಂದಾಗಿ ಕೆಲಸ ದೊರೆತಿದೆ. ಕಾಂಗ್ರೆಸ್‌ ಹೆಚ್ಚಿನ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯವನ್ನು ಮಾಡಿದೆ. ವಿಮಾನ ನಿಲ್ದಾಣ, ಎಂಆರ್‌ಪಿಎಲ್, ಎನ್‌ಎಂಪಿಟಿಗೆ ಕಾಂಗ್ರೆಸ್ ಕೊಡುಗೆ ನೀಡಿದೆ, ಆದರೆ ಬಿಜೆಪಿ ಇದನ್ನು ಮಾರಾಟ ಮಾಡುತ್ತಿದೆ” ಎಂದು ರಮಾನಾಥ ರೈ ದೂರಿದರು.

“ಕಾಂಗ್ರೆಸ್‌ನ್ನುಅವಮಾನ ಮಾಡುವುದು ತಪ್ಪು. ನಾವು ಸೋತಿದ್ದೇವೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ೭ ಶಾಸಕರಿದ್ದ ಒಂದು ಕಾಲವಿತ್ತು. ಮುಂದಿನ ದಿನಗಳಲ್ಲಿ ನಾವು ಮತ್ತೇ ಪುಟಿದೇಳುತ್ತೇವೆ. ಧರ್ಮದ ಅಮಲನ್ನು ಬಂಡವಾಳ ಮಾಡಿಕೊಂಡು ಅವರು ಅಧಿಕಾರಕ್ಕೆ ಬಂದಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾರ್ಪೊರೇಟರ್ ನವೀನ್ ಡಿ ಸೋಜಾ, ಶಶಿಧರ್ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.