ಬಿಜೆಪಿಯಿಂದ ಸ್ಪರ್ಧಿಸಲು ನನಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ : ಪ್ರಮೋದ ಮುತಾಲಿಕ್ -Vishwanews24

Featured, ರಾಜ್ಯ ನ್ಯೂಸ್

ಬಿಜೆಪಿಯಿಂದ ಸ್ಪರ್ಧಿಸಲು ನನಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ : ಪ್ರಮೋದ ಮುತಾಲಿಕ್ -Vishwanews24

ಹುಬ್ಬಳ್ಳಿ : ”ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ನನಗೆ ಟಿಕೆಟ್ ದೊರೆಯುವ ಸಾಧ್ಯತೆಯಿದೆ” ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ”ಪಕ್ಷದ ಎಲ್ಲಾ ಪ್ರಮುಖರನ್ನು ನಾನು ಭೇಟಿಯಾಗಿದ್ದೇನೆ. ಟಿಕೆಟ್‌ ನೀಡುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇನೆ. ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ” ಎಂದು ಮುತಾಲಿಕ್‌ ತಿಳಿಸಿದ್ದಾರೆ.

”ನನಗೆ ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಲಭಿಸುವ ಸಾಧ್ಯತೆ ಶೇ 90ರಷ್ಟು ಇದೆ. ಆದರೆ ರಾಜಕೀಯದಲ್ಲಿ ಕೊನೆ ಘಳಿಗೆಯಲ್ಲೂ ಯಾವುದೇ ಬದಲಾವಣೆಯಾಗುವುದು ಸಹಜ” ಎಂದೂ ಹೇಳಿದ್ದಾರೆ.

”ಒಂದು ವೇಳೆ ಕೊನೆ ಕ್ಷಣದ ಬದಲಾವಣೆಯಿಂದಾಗಿ ನನಗೆ ಟಿಕೆಟ್‌ ಲಭಿಸದೆ ಬೇರೆಯವರಿಗೆ ಸಿಕ್ಕರೆ ನಾನು ಅವರ ಪರವಾಗಿ ಪ್ರಚಾರ ಮಾಡಲು ಕರೆದರೆ ಹೋಗುತ್ತೇನೆಯೇ ಹೊರತು ಪಕ್ಷದ ವಿರುದ್ದವಾಗಿ ಪಕ್ಷೇತರವಾಗಿಯಂತೂ ಸ್ಪರ್ಧಿಸಲಾರೆ” ಎಂದು ತಿಳಿಸಿದ್ದಾರೆ.

ಇನ್ನು, ”ಇದು ನನ್ನ ರಾಜಕೀಯದ ಕೊನೆಯ ಜೀವನವಾಗಿದೆ. ಇನ್ನೂ ಸ್ಪಲ್ಪ ಸಮಯದಲ್ಲೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದೂ ಮಾಹಿತಿ ನೀಡಿದ್ದಾರೆ.