ಬೃಹತ್‌ ಮೆರವಣಿಗೆಗೆ ಹರಿದು ಬಂದ ಕೇಸರಿ ಪಡೆ : ಸುನಿಲ್‌ ಕುಮಾರ್‌ ನಾಮಪತ್ರ ಸಲ್ಲಿಕೆ

Featured, ಉಡುಪಿ

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ಅವರು ಎ. 23ರಂದು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೂ ಮೊದಲು ಕಾಯರ್ಕಕರ್ತರ ಬೃಹತ್‌ ಮೆರವಣಿಗೆ ನಡೆಯಿತು.

ಚೆಂಡೆ, ಕಹಳೆಯೊಂದಿಗೆ ನಗರದ ಅನಂತಶಯನದಿಂದ ಪ್ರಾರಂಭ ಗೊಂಡು ನಗರ ಮುಖ್ಯರಸ್ತೆಯ ಮೂಲಕವಾಗಿ ಮೂರು ಮಾರ್ಗ, ತಾ.ಪಂ.ನಿಂದ ಕಾರ್ಯಕರ್ತರ ಸಭೆ ನಡೆದ ಕುಕ್ಕುಂದೂರು ಗ್ರಾ.ಪಂ. ಮೈದಾನದವರೆಗೆ ಸಾಗಿತು.

ಹರಿದು ಬಂದ ಜನಸಾಗರ
ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಡೆದ ಈ ಮೆರವಣಿಗೆಗೆ ಜನಸ್ತೋಮವೇ ಹರಿದು ಬಂದಿತ್ತು. ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಜನ ಆಗಮಿಸಿದ್ದರು. ಎಲ್ಲಾ ಬೂತ್‌ ಮಟ್ಟದ, ಗ್ರಾಮ ಸಮಿತಿಯ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು, ಹಿಂದೂ ಸಂಘಟನೆಗಳ ಮುಖಂಡರು, ಬಿಜೆಪಿ ಯುವಮೋರ್ಚಾ ಸದಸ್ಯರು, ಮುಂಬೈ, ಬೆಂಗಳೂರು, ಪುಣೆ ಮೊದಲಾದ ಭಾಗದಿಂದ ಆಗಮಿಸಿದ ಪಕ್ಷದ ಅಭಿಮಾನಿಗಳು ಭಾಗವಹಿಸಿದ್ದರು.

ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಶಾಸಕ ವಿ. ಸುನಿಲ್‌ ಕುಮಾರ್‌, ಬಿಜೆಪಿ ಕ್ಷೇತ್ರ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಬೋಳ ಪ್ರಭಾಕರ ಕಾಮತ್‌, ವಕ್ತಾರ ಹರೀಶ್‌ ಶೆಣೈ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್‌, ಮಹಾವೀರ ಹೆಗ್ಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಭಾಸ್ಕರ ಎಸ್‌. ಕೋಟ್ಯಾನ್‌, ಪ್ರಚಾರ ಸಮಿತಿಯ ಅಧ್ಯಕ್ಷ ಮಹೇಶ್‌ ಶೆಟ್ಟಿ, ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು, ರೇಶ್ಮಾ ಶೆಟ್ಟಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ, ಪದಾಧಿಕಾರಿಗಳು ಉಪಸ್ಥಿತರಿದ್ದರು.