ಬೆಳಪು : ದನಗಳ್ಳರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ : ಪೊಲೀಸ್ ಇಲಾಖೆಗೆ ದೇವಿಪ್ರಸಾದ್ ಶೆಟ್ಟಿ ಮನವಿ – vishwanews24
ಬೆಳಪು : ದನಗಳ್ಳರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ : ದೇವಿಪ್ರಸಾದ್ ಶೆಟ್ಟಿ
ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ದನಗಳ್ಳರ ಹಾವಳಿ ಜಾಸ್ತಿಯಾಗುತ್ತಿದ್ದು, ಯುವಕರು ರಸ್ತೆ ಬದಿಗಳಲ್ಲಿ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಬರುತ್ತಿದ್ದು, ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಮಾನ್ಯ ಪೊಲೀಸ್ ಠಾಣಾಧಿಕಾರಿಯವರಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಮಾಡಲಾಗಿದೆಂದು ಬೆಳಪು ಗ್ರಾ.ಪಂ ಅಧ್ಯಕ್ಷರಾದ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಬೆಳಪು ಗ್ರಾಮದಲ್ಲಿ 7 ದನಗಳ ಕಳವು ಆಗಿರುವ ಬಗ್ಗೆ ತಿಳಿದು ಬಂದಿದ್ದು, 2 ದಿನಗಳ ಹಿಂದೆ ಗುರುರಾಜ್ ಆಚಾರ್ಯ ದಂಪತಿಗಳ ಮನೆಯ ಹಟ್ಟಿಗೆ ದನಕಳ್ಳರು ನುಗ್ಗಿದ್ದು ಮನೆ ಮಾಲಕರು ಎಚ್ಚರವಾದಾಗ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವಿಚಾರ ತಿಳಿದ ತಕ್ಷಣ ತಡರಾತ್ರಿ ಅವರ ಮನೆಗೆ ತೆರಳಿ ಧೈರ್ಯ ತುಂಬಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ಎಚ್ಚರ ವಹಿಸುವಂತೆ ಹೇಳಿದ್ದಾರೆ.

ಇದು ಅತ್ಯಂತ ಗಂಭೀರ ವಿಚಾರವಾಗಿರುವುದರಿಂದ ನಮ್ಮ ಗ್ರಾಮಕ್ಕೆ ಕಳಂಕವಾಗುತ್ತದೆ. ಊರಿನ ಯುವಕರು ಮತ್ತು ಸಂಘ ಸಂಸ್ಥೆಯವರು ಗಸ್ತು ತಿರುಗುವಂತೆ ಮನವಿ ಮಾಡಿದ್ದು, ಗ್ರಾಮದಲ್ಲಿ ಗಾಂಜಾ ಸೇವನೆ ಬಗ್ಗೆ ಎಚ್ಚರ ವಹಿಸಬೇಕಾಗಿದ್ದು, ತಡರಾತ್ರಿ ರಸ್ತೆ ಬದಿಯಲ್ಲಿ ಅನಗತ್ಯ ತಿರುಗುವ ಯುವಕರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಬೇಕು. ಪರಿಸ್ಥಿತಿ ಕೈಮೀರುವ ಮೊದಲು ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ಮುಂದೆ ಅಶಾಂತಿಗೆ ಕಾರಣವಾಗುತ್ತದೆಂದು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರಿನಲ್ಲಿ ತಿಳಿಸಲಾಗಿದೆಂದು ಶೆಟ್ಟಿ ತಿಳಿಸಿದ್ದಾರೆ.
