ಬೆಳೆಗಳ ಹಾನಿ, ಮನೆಗಳ ಹಾನಿಗೆ ಪರಿಹಾರ ಕೊಡದ ಡಿಸಿಗಳ ವಿರುದ್ಧ ಎಚ್ಚರಿಕೆ ನೀಡಿದ ಸಿಎಂ – Vishwanews24
- ಜನರ ನಡುವೆ ಹೋಗಿ ಕೆಲಸ ಮಾಡಿ , ಕೆಳಹಂತದ ಅಧಿಕಾರಿಗಳು ಡಿಸಿಗಳಂತೆ ವರ್ತಿಸಲು ಅವಕಾಶ ಕೊಡಬೇಡಿ..
- ಅಧಿಕಾರ ನಿಮ್ಮಲ್ಲಿ ಇದ್ದಾಗ ಇನ್ನಷ್ಟು ಮೃದುತ್ವ, ವಿನಯತೆ ತರಬೇಕು..
- ಎಚ್ಚರಿಕೆಯಿಂದ ಆಡಳಿತದ ಕೆಲಸ ಮಾಡಿ..
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಆಡಳಿತ ಪಾಠ ಮಾಡಿದರು.
ಸಭೆಯಲ್ಲಿ, ಅತಿವೃಷ್ಟಿಯಿಂದ ಬೆಳೆಹಾನಿ,ಮನೆಗಳ ಹಾನಿ ಬಗ್ಗೆ ಪರಾಮರ್ಶೆ ನಡೆಸಲಾಯಿತು.ಜನರ ಸೇವೆ ಮಾಡುವ ಪಬ್ಲಿಕ್ ಸರ್ವೆಂಟ್ಸ್ ಜಿಲ್ಲೆಗಳಲ್ಲಿ ಅಧಿಕಾರ ಇದೆ ಎನ್ನುವುದನ್ನು ಬಿಟ್ಟು ಜನರ ಕೆಲಸ ಮಾಡಿ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂದುಕೊಂಡು ಫೀಲ್ಡಿನಲ್ಲೂ ಅದೇ ಥರ ಕೆಲಸ ಮಾಡಬೇಡಿ. ಜನರ ನಡುವೆ ಹೋಗಿ ಜನರ ಜತೆ ಕೆಲಸ ಮಾಡಿ. ಕೆಳಹಂತದ ಅಧಿಕಾರಿಗಳು ಡಿಸಿಗಳಂತೆ ವರ್ತಿಸಲು ಅವಕಾಶ ಕೊಡಬೇಡಿ. ನಿಮ್ಮಸ್ವಂತಿಕೆ, ವಿವೇಚನೆ ಬಳಸಿ ಕೆಲಸ ಮಾಡಿ. ಅಧಿಕಾರ ನಿಮ್ಮಲ್ಲಿ ಇದ್ದಾಗ ಇನ್ನಷ್ಟು ಮೃದುತ್ವ, ವಿನಯತೆ ತರಬೇಕು. ಎಚ್ಚರಿಕೆಯಿಂದ ಆಡಳಿತದ ಕೆಲಸ ಮಾಡಿ ಎಂದು ಸಿಎಂ ಸೂಚನೆ ನೀಡಿದರು.
ಬೆಳೆಗಳ ಹಾನಿ,ಮನೆಗಳ ಹಾನಿಗೆ ಪರಿಹಾರ ಕೊಡದ ಡಿಸಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಸಿಎಂ, ಕೆಲಸ ಆಗಲಿಲ್ಲ ಅಂತ ಕೆಳಗಿನ ಅಧಿಕಾರಿಗಳ ಮೇಲೆ ಹಾಕಬೇಡಿ. ಕೆಲಸಗಳು ಆಗದಿರುವುದಕ್ಕೆ ನೀವೇ ಹೊಣೆ, ನಿಮ್ಮದೆ ಹೊಣೆಗಾರಿಕೆ ಎಂದು ಸಭೆಯಲ್ಲಿ ಡಿಸಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡರು.
ಕಂದಾಯ ಸಚಿವ ಆರ್. ಅಶೋಕ್, ಸಚಿವ ಸಂಪುಟದ ಇತರ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿರುವುದು ಅಮಾನವೀಯ : ಸಿದ್ದರಾಮಯ್ಯ – Vishwanews24
