ಬೆಳ್ತಂಗಡಿ : ಚಿನ್ನಾಭರಣ ತೊಳೆದು ಕೊಡುವುದಾಗಿ ನಂಬಿಸಿ ಚಿನ್ನದ ಸರ ಕರಗಿಸಿ ವಂಚನೆ – vishwanews24
ಬೆಳ್ತಂಗಡಿ : ಚಿನ್ನಾಭರಣ ತೊಳೆದು ಕೊಡುವುದಾಗಿ ನಂಬಿಸಿ ಚಿನ್ನದ ಸರ ಕರಗಿಸಿ ವಂಚನೆ
ಬೆಳ್ತಂಗಡಿ: ಕಾಶಿಪಟ್ಣ ಗ್ರಾಮದ ಪಣಿಲಾಜೆಯಲ್ಲಿ ವೃದ್ಧೆಯೊಬ್ಬರು ಮನೆಯಲ್ಲಿದ್ದ ಸಂದರ್ಭದಲ್ಲಿ ಚಿನ್ನವನ್ನು ತೊಳೆದು ಕೊಡುವುದಾಗಿ ಅವರ ಎರಡು ಮುಕ್ಕಾಲು ಪವನ್ ಚಿನ್ನದ ಸರವನ್ನು ರಾಸಾಯನಿಕದ ಮೂಲಕ ಕರಗಿಸಿ ಚಿನ್ನವನ್ನು ವಂಚಿಸಿದ ಘಟನೆ ಸಂಭವಿಸಿದೆ.
ಘಟನೆಯ ಕುರಿತು ಪಣಿಲಾಜೆ ನಿವಾಸಿ 90ರ ಹರೆಯದ ರುಕ್ಮಿಣಿ ಶೆಟ್ಟಿಗಾರ್ ಅವರು ದೂರು ನೀಡಿದ್ದು, ಅವರು ಫೆ. 10ರಂದು ಬೆಳಗ್ಗೆ 11.15ರ ಸುಮಾರಿಗೆ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಚಿನ್ನಾಭರಣ ತೊಳೆದು ಕೊಡುವುದಾಗಿ ಹೇಳಿದ. ಅದನ್ನು ನಂಬಿದ ರುಕ್ಮಿಣಿಯವರು ಕಪಾಟಿನ ಲಾಕರಿನಲ್ಲಿದ್ದ ಲಕ್ಷ್ಮೀ ಪದಕ ಇರುವ ಎರಡು ಮುಕ್ಕಾಲು ಪವನ್ ನ ಚಿನ್ನದ ಸರವನ್ನು ತಂದುಕೊಟ್ಟರು. ಬಳಿಕ ಆತ ಅಂಗಳದಲ್ಲಿದ್ದ ನಳ್ಳಿಯಿಂದ ಮಗ್ ಗೆ ನೀರು ಹಾಕಿ ಬ್ರೆಶ್ ನಿಂದ ಸರವನ್ನು ತೊಳೆಯುವ ನಾಟಕ ಮಾಡಿದ್ದಾನೆ.
ಇದನ್ನೂ ಓದಿ:
ಇನ್ಮುಂದೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಕಡ್ಡಾಯ : ಕೇಂದ್ರ ಸರ್ಕಾರದಿಂದ ಹೊಸ ಗೈಡ್ಲೈನ್ಸ್ – vishwanews24
ಮುಂದೆ ಪೇಪರ್ ನಲ್ಲಿ ಸುತ್ತಿ ಕೊಟ್ಟಿದ್ದು, ಫ್ಯಾನ್ ಗಾಳಿಗೆ ಇಟ್ಟು ಒಣಗಿಸುವಂತೆ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅವರು ಪೇಪರ್ ತೆರೆದು ನೋಡಿದಾಗ ಅರಶಿನ ಪುಡಿಯಂತೆ ಕಾಣುವ ಪುಡಿ ಇದ್ದು, ಚಿನ್ನದ ಸರದ ಸಣ್ಣ ಸಣ್ಣ ತುಂಡುಗಳು, ತಾಮ್ರದ ಬಣ್ಣಕ್ಕೆ ತಿರುಗಿದ ಲಕ್ಷ್ಮೀ ಪದಕ ಕಂಡುಬಂದಿದೆ. ಚಿನ್ನದ ಸರವನ್ನು ವಂಚಿಸಿರುವ ಆರೋಪಿಯ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಪೋಟೊ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
