ಭಯೋತ್ಪಾದನೆ ವಿಸ್ತರಿಸಲು ಆರ್‌ಎಸ್ಎಸ್ ಕಾರಣ : ಪಾಕ್

Featured, ದೇಶ

ನ್ಯೂಯಾರ್ಕ್‌: ಗಡಿಯಾಚೆಗಿನ ಭಯೋತ್ಪಾದನೆ ಗುರಿಯಾಗಿಟ್ಟುಕೊಂಡು ವಿಶ್ವ ವೇದಿಕೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಮಾಡಿರುವ ಕಟು ಟೀಕೆಗಳಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ, ಆರ್‌ಎಸ್‌ಎಸ್‌ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರತ್ತ ಬೊಟ್ಟು ಮಾಡಿ ಬಚಾವಾಗಲು ಯತ್ನಿಸಿದೆ.

‘‘ಬಿಜೆಪಿಯ ಸೈದ್ಧಾಂತಿಕ ಸಲಹೆಗಾರ ಆರ್‌ಎಸ್‌ಎಸ್‌, ಭಾರತದಲ್ಲಿ ಮತಾಂಧತೆಯನ್ನು ಹರಡುವ ಕೆಲಸ ಮಾಡುತ್ತಿದೆ. ಇದು ನಮ್ಮ ಉಪ ಖಂಡದಲ್ಲಿ ಭಯೋತ್ಪಾದನೆ ವಿಸ್ತರಿಸಲು ಕಾರಣವಾಗಿದೆ. ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಕೂಡ ಅಂಥದ್ದೇ ಕೆಲಸ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಶ್ರೇಷ್ಠತೆ ಪರ ಅವರು ಉಗ್ರ ಹೋರಾಟಕ್ಕೆ ಬಹಿರಂಗ ಬೆಂಬಲ ನೀಡಿದ್ದಾರೆ,’’ ಎಂದು ವಿಶ್ವಸಂಸ್ಥೆಯಲ್ಲಿನ ಪಾಕ್‌ ರಾಯಭಾರಿ ಸಾದ್‌ ವಾರೈಕ್‌ ಆರೋಪಿಸಿದರು.

ಬಾಂಗ್ಲಾ ವಲಸಿಗರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ನಡೆಸಿದ ವಾಗ್ದಾಳಿಯನ್ನೂ ತಮ್ಮ ಅನುಕೂಲಕ್ಕೆ ತಕ್ಕತೆ ತಿರುಗಿಸಿದ ವಾರೈಕ್‌, ‘‘ಬಿಜೆಪಿ ನಾಯಕರೊಬ್ಬರ ವಾಗ್ದಾಳಿಯಿಂದ ಅಸ್ಸಾಂನಲ್ಲಿರುವ ಬೆಂಗಾಲಿಗಳು ಹಠಾತ್ತನೆ ನೆಲೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅವರನ್ನು ಆ ನಾಯಕರು ಗೆದ್ದಲ ಹುಳುಗಳು ಎಂದು ಜರಿದಿದ್ದಾರೆ. ಇದರಿಂದ ಅಲ್ಲಿ ಚರ್ಚ್‌ ಮತ್ತು ಮಸೀದಿಗಳಿಗೆ ಬೆಂಕಿ ಇಡಲಾಗಿದೆ,’’ ಎಂದು ದೂರಿದರು.