ಭಾರತದ ತಂಟೆಗೆ ಬಂದರೆ ವಿರೋಧಿಗಳನ್ನು ಪುಡಿ ಪುಡಿಗೈಯಲಾಗುವುದು : ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್
ನವದೆಹಲಿ : ಪಾಕಿಸ್ತಾನದಲ್ಲಿ ಸೋಮವಾರ ನಡೆದಿದ್ದ ಮಹಾಚುನಾವಣೆಯಲ್ಲಿ ಹಾಲಿ ರಾಜಕಾರಣಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ಹೊಸ ಪ್ರಧಾನಿಯಾಗುವತ್ತ ದಾಪುಗಾಲಿಡುತ್ತಿದ್ದಾರೆ. ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಸಾರಥ್ಯದ ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್ ಪಕ್ಷ ಮುನ್ನಡೆ ಸಾಧಿಸಿದ್ದು, ಬಹುಮತ ಪಡೆಯುವುದು ನಿಚ್ಚಳವಾದ ಬೆನ್ನಲ್ಲೇ ಇಮ್ರಾನ್ ಖಾನ್ ಬೆಂಬಲಿಗರು ಭಾರತದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಗಿಲ್ ವಿಜಯ್ ದಿವಾಸ್ ಆಚರಣೆಯಲ್ಲಿ ಮಾತನಾಡಿದ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಪಾಕಿಸ್ತಾನದಲ್ಲಿ ಯಾರು ಸರ್ಕಾರ ಮಾಡುತ್ತಾರೆ ಎಂದು ಅಲ್ಲಿನ ಜನರು ನಿರ್ಧರಿಸುತ್ತಾರೆ.ಕಾರ್ಗಿಲ್ ಯುದ್ಧದ ನಂತರ ಯಾವ ರೀತಿ ರಾಜಕೀಯ ಸ್ಥಿತಿಗತಿಗಳು ಬದಲಾಗಿವೆ ಎಂಬುವುದು ನಮ್ಮ ಕಣ್ಣ ಮುಂದೆ ಇದೆ.ಭಾರತೀಯ ಸೇನೆ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ. ಭಾರತದ ತಂಟೆಗೆ ಬಂದರೆ ವಿರೋಧಿಗಳನ್ನು ಪುಡಿ ಪುಡಿಗೈಯಲಾಗುವುದು ಎಂದು ಪಾಕಿಸ್ತಾನಕ್ಕೆ ಪರೋಕ್ಷವಾದ ಎಚ್ಚರಿಕೆಯನ್ನು ರಣಬೀರ್ ಸಿಂಗ್ ನೀಡಿದ್ದಾರೆ.
