ಭಾರತವನ್ನು ಅಸ್ಥಿರಗೊಳಿಸಬಹುದೆಂದು ನೆರೆಯ ದೇಶ ಭಾವಿಸಿದರೆ ಆ ಕನಸನ್ನು ಬಿಟ್ಟುಬಿಡಿ : ಪಾಕಿಗೆ ಮೋದಿ ಎಚ್ಚರಿಕೆ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿ, ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ನೆರೆಯ ದೇಶ ಭಾವಿಸಿದರೆ ಅದನ್ನು ಮರೆತು ಬಿಡಲಿ ಅದು ಸಾಧ್ಯವಿಲ್ಲ ಎಂದು  ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಯೋಧರ ಮೇಲೆ ದಾಳಿ ನಡೆಸಿ ಉಗ್ರರು ಭಾರೀ ದೊಡ್ಡ ತಪ್ಪು ಮಾಡಿದ್ದಾರೆ, ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ ಇಂತಹ ಕೃತ್ಯಗಳಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ.

ದೇಶಕ್ಕೆ ನಾನು ಭರವಸೆ ನೀಡುತ್ತೇನೆ. ಈ ದಾಳಿ ಹಿಂದೆ ಯಾವ ಶಕ್ತಿ ಇದ್ದರೂ, ಯಾರೇ ಇದ್ದರೂ ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡುತ್ತೇವೆ. ಈ ಸಮಯದಲ್ಲಿ ನಮ್ಮನ್ನು ನೆನಪಿಸಿಕೊಳ್ಳುತ್ತಿರುವವರ ಭಾವನೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ತಾನು ನಿರ್ಮಿಸಿದ ದಾರಿಯಲ್ಲಿ ಪಾಕಿಸ್ತಾನ ಕೇವಲ ದಾಳಿ ನೋಡುತ್ತಾ ಬಂದಿದ್ದರೆ, ನಾವು ನಿರ್ಮಿಸಿದ ದಾರಿಯಲ್ಲಿ ಕೇವಲ ಅಭಿವೃದ್ಧಿ ನೋಡುತ್ತಾ ಬಂದಿದ್ದೇವೆ. ಭಾರತದ 130 ಕೋಟಿ ಜನರು ಸೇರಿ ಈ ರೀತಿಯ ದಾಳಿಗೆ ಸರಿಯಾದ ಉತ್ತರ ನೀಡುತ್ತಾರೆ ಎಂದರು.

ದೆಹಲಿಯಿಂದ ವಾರಣಾಸಿಗೆ ಸಂಚರಿಸುವ ಹೊಸ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಮೋದಿಯವರು ರೈಲಿಗೆ ಚಾಲನೆ ನೀಡುವುದಕ್ಕೆ ಮುನ್ನ ನೆರೆದಿದ್ದ ಗಣ್ಯರು ನಿನ್ನೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿದರು.ಇದೊಂದು ಭಾವನಾತ್ಮಕ ಮತ್ತು ಸೂಕ್ಷ್ಮ ಸಮಯ. ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಈ ಸಂದರ್ಭದಲ್ಲಿ ನಾವು ರಾಜಕೀಯದಿಂದ ದೂರವುಳಿಯಬೇಕು. ದೇಶದ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.