ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ. : ಕ್ರೀಡಾ ಸಚಿವ ಕಿರಣ್‌‌ ರಿಜಿಜು -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ:ಶ್ರೀನಿವಾಸ ಗೌಡರನ್ನು ಕರೆಸಿ ಪರಿಣಿತರಿಂದ ತರಬೇತಿ ಕೊಡಿಸಲಾಗುವುದು ಎಂದು ಕ್ರೀಡಾ ಸಚಿವ ಕಿರಣ್‌‌ ರಿಜಿಜು ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಈ ಸಂಬಂಧ ಟ್ಟೀಟ್‌ ಮಾಡಿರುವ ಅವರು, “ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ. ಒಲಿಂಪಿಕ್ಸ್‌ನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ವಿಶೇಷವಾಗಿ ಅಥ್ಲೆಟಿಕ್ಸ್‌ನಲ್ಲಿ ಮಾನವನ ಸಾಮರ್ಥ್ಯ ಮತ್ತು ಶಕ್ತಿಯ ಅಂತಿಮಘಟ್ಟವನ್ನು ಮೀರಿಸಲಾಗುತ್ತದೆ. ಭಾರತದಲ್ಲಿ ಯಾವುದೇ ಪ್ರತಿಭೆಗಳನ್ನು ಪರೀಕ್ಷಿಸದೆ ಬಿಡುವುದಿಲ್ಲ ಎಂಬುದನ್ನು ನಾನು ಖಾತರಿಪಡಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ಕಂಬಳ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮೂಡಬಿದಿರೆ ಮೀಯಾರಿನ ಶ್ರೀನಿವಾಸಗೌಡ ಅವರು 142.50 ಮೀಟರ್‌ ಉದ್ದದ ಕಂಬಳದ ಗದ್ದೆಯಲ್ಲಿ ಕೇವಲ 13.62 ಸೆಕೆಂಡುಗಳಲ್ಲಿ ಕೋಣಗಳನ್ನು ಓಡಿಸಿಕೊಂಡು ಗುರಿ ತಲುಪಿದ್ದರು. ಇದನ್ನು 100 ಮೀಟರ್‌ ಇಳಿಸಿದರೆ ತಗುಲುವ ಸೆಕೆಂಡುಗಳು ಕೇವಲ 9.55! ಅಂದರೆ ಉಸೇನ್‌ ಬೋಲ್ಟ್‌ ನಿರ್ಮಿಸಿದ ದಾಖಲೆಗಿಂತ 0.3 ಸೆಕೆಂಡ್‌ ಕಡಿಮೆ ಅವಧಿಯಲ್ಲೇ ತಲುಪಿದ್ದರು.

ಈ ಸುದ್ದಿ ಗುರುವಾರ, ಶುಕ್ರವಾರವಿಡೀ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಹಲವರು ಶ್ರೀನಿವಾಸ ಗೌಡ ಅವರಿಗೆ ತರಬೇತಿ ನೀಡಿ ಕ್ರೀಡಾಕೂಟದಲ್ಲಿ ಅವರನ್ನು ಓಡಿಸುವಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೀಗ ಕಿರಣ್‌ ರಿಜಿಜು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.