ಮಂಗಳೂರಿನಲ್ಲಿ ಪ್ರಧಾನಿ ಮೋದಿಯಿಂದ ಭರ್ಜರಿ ಚುನಾವಣೆ ಪ್ರಚಾರ ; ಕೇಸರಿಮಯವಾದ ಮಂಗಳೂರು ನಗರ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಮಾಡಿದರು.

ನಗರದ ಕೇಂದ್ರ ಮೈದಾನದಲ್ಲಿ ಬಿಜೆಪಿ ಪಕ್ಷದ ಲೋಕಸಭಾ ಚುನಾವಣೆಯ ಪ್ರಚಾರದ ಬೃಹತ್ ಬಹಿರಂಗ ’ಸಂಕಲ್ಪ ಸಮಾವೇಶ ’ ಆರಂಭಗೊಂಡಿದ್ದು ಪ್ರಧಾನಿ ” ನಿಮ್ಮ ಚೌಕಿದಾರ್ ನರೇಂದ್ರ ಮೋದಿಯ ನಮಸ್ಕಾರಗಳು ” ಎಂದು ಕನ್ನಡದಲ್ಲಿ ಹೇಳಿ ಮಾತು ಆರಂಭಿಸಿದ ಮೋದಿ ಇಡೀ ಮಂಗಳೂರು ನಗರ ಕೇಸರಿಮಯವಾಗಿದ್ದು ಜನರ ಪ್ರೀತಿಗೆ ನಾನು ಆಭಾರಿ ಎಂದು ಹೇಳಿದರು.

ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ಗಟ್ಟಿಗೊಳ್ಳುತ್ತಿದ್ದು, ಇದಕ್ಕೆ ಪ್ರತಿಯೊಬ್ಬ ಮತದಾರನಿಗೂ ಧನ್ಯವಾದ ಅರ್ಪಿಸುವುದಾಗಿ ಪ್ರಧಾನಿ ಮೋದಿ ಹೇಳಿದರು.

21ನೇ ಶತಮಾನದ ಬಳಿಕ ನವಭಾರತದ ಚಹರೆ ಹೇಗಿರಬೇಕು ಎಂಬುದನ್ನು ನಿರ್ಧರಿಸಲು 2019ರ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದು ಎಂದು ಮೋದಿ ಬಣ್ಣಿಸಿದರು.

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಪರಿವಾರವಾದದ ರಾಜಕಾರಣ ಮಾಡಿದರೆ, ಬಿಜೆಪಿ ರಾಷ್ಟ್ರವಾದದ ರಾಜಕಾರಣ ಮಾಡುತ್ತದೆ ಎಂದು ಮೋದಿ ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕುಟುಂಬ ಸದಸ್ಯರನ್ನೆಲ್ಲಾ ಚುನಾವಣೆಗೆ ನಿಲ್ಲಿಸಿರುವ  ಕಾಂಗ್ರೆಸ್-ಜೆಡಿಎಸ್ ಗೆ , ಓರ್ವ ಚಾಯ್ ವಾಲಾ ಪ್ರಧಾನಿಯಾಗಿರುವುದನ್ನು ನೋಡಲಾಗುತ್ತಿಲ್ಲ ಎಂದು ಪ್ರಧಾನಿ ಹರಿಹಾಯ್ದರು.

ತುಷ್ಠೀಕರಣವನ್ನೇ ರಾಜಕಾರಣದ ಅಡಿಪಾಯ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಗೆ ವಿರುದ್ಧವಾಗಿ ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಡಿಪಾಯದ ಮೇಲೆ ರಾಜಕಾರಣ ಮಾಡುತ್ತದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್-ಜೆಡಿಎಸ್ ನದ್ದು ವಂಶೋದಯ ರಾಜಕಾರಣ ಮಾಡಿದರೆ ಬಿಜೆಪಿ ಅಂತ್ಯೋದಯದ ರಾಜಕಾರಣ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.