ಮಂಗಳೂರು : ಐದು ಎಕರೆ ಜಾಗದಲ್ಲಿ ಸಾಫ್ಟ್ ವೇರ್ ಪಾರ್ಕ್ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು : DCM ಸಿ.ಎನ್. ಅಶ್ವತ್ಥ ನಾರಾಯಣ ಭರವಸೆ -Vishwanews24
ಮಂಗಳೂರು : ಐದು ಎಕರೆ ಜಾಗದಲ್ಲಿ ಸಾಫ್ಟ್ ವೇರ್ ಪಾರ್ಕ್ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು : DCM ಸಿ.ಎನ್. ಅಶ್ವತ್ಥ ನಾರಾಯಣ ಭರವಸೆ -Vishwanews24
ಮಂಗಳೂರು: ಮಂಗಳೂರಿನಲ್ಲಿ ಐದು ಎಕರೆ ಜಾಗದಲ್ಲಿ ಸಾಫ್ಟ್ ವೇರ್ ಪಾರ್ಕ್ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಯಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಭರವಸೆ ನೀಡಿದರು.
ಬುಧವಾರ ಇಲ್ಲಿ ನಡೆದ ಇನ್ನೊವೇಷನ್ ಕಾನ್ ಕ್ಲೇವ್ ಉದ್ಘಾಟಿಸಿ ಅವರು ಮಾತನಾಡಿದರು.
.ರಾಜಧಾನಿ ಬೆಂಗಳೂರಿನಿಂದ ಹೊರಗೆ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ವಿಸ್ತರಿಸಲು ದೊಡ್ಡ ಪ್ರಯತ್ನ ಮಾಡುತ್ತಿರುವ ರಾಜ್ಯ ಸರಕಾರವು ಮಂಗಳೂರು ನಗರವನ್ನು ಅತ್ಯಂತ ಪ್ರಮುಖ ಕ್ಲಸ್ಟರ್ ಆಗಿ ಗುರುತಿಸಿದೆ. ಅನೇಕ ವರ್ಷಗಳಿಂದ ತನ್ನಲ್ಲಿ ಅಡಗಿರುವ ಸಂಪನ್ಮೂಲಗಳಿಂದ ಬೆಂಗಳೂರು ಐಟಿ ನಗರವಾಗಿ ಸಹಜವಾಗಿಯೇ ಬೆಳೆದಿದೆ. ಇದೀಗ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರನ್ನು ಉದಯೋನ್ಮುಖ ತಂತ್ರಜ್ಞಾನ ಕ್ಲಸ್ಟರ್ ಆಗಿ ಗುರುತಿಸಿದ್ದು, ಅದನ್ನು ವೇಗಗತಿಯಲ್ಲಿ ಮುಂದಕ್ಕೆ ಕೊಂಡಯ್ಯಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಐಟಿ ಉದ್ಯಮಗಳ ನೆಲೆಯಾಗುವುದರ ಜತೆಗೆ, ನವೋದ್ಯಮಗಳ ತಾಣವಾಗಿಯೂ ಮಂಗಳೂರು ಹೊರಹೊಮ್ಮಲಿದೆ. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದು ಡಿಸಿಎಂ ಹೇಳಿದರು.
ಉತ್ತಮ ಪರಿಸರ, ಪ್ರವಾಸೋದ್ಯಮ, ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆ ಮುಂತಾದ ಪೂರಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳೂರು ನಗರವನ್ನು ಆವಿಷ್ಕಾರ ಹಾಗೂ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ರೂಪಿಸಲಾಗುವುದು ಎಂದರು.
ಐಟಿ ಉದ್ಯಮದ ಜತೆಗೆ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಮತ್ತು ಅಭಿವೃದ್ಧಿ ನಿರ್ವಹಣೆ ಕ್ಷೇತ್ರದಲ್ಲೂ ಮಂಗಳೂರು ನಗರವನ್ನು ಪ್ರಮುಖ ಕ್ಲಸ್ಟರ್ ಆಗಿ ನಾವು ಪರಿಗಣಿಸಿದ್ದೇವೆ. ಅಲ್ಲದೆ, ಬೆಂಗಳೂರು ಹೊರಗಿನ ನಮ್ಮ ಯೋಜನೆಗಳ ಮುಖ್ಯ ಭಾಗವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಇಲಾಖೆಗಳು ರಾಜ್ಯದಾದ್ಯಂತ ಆವಿಷ್ಕಾರ ಹಬ್ಗಳನ್ನು ಸ್ಥಾಪಿಸುತ್ತಿವೆ. ಈ ಪಟ್ಟಿಯಲ್ಲಿ ಮಂಗಳೂರು ಕೂಡ ಇದೆ ಎಂದು ಹೇಳಿದರು.
ಇದರ ಜತೆಗೆ ಮಂಗಳೂರು ಸೇರಿದಂತೆ ರಾಜ್ಯದ ಐದು ನಗರಗಳಲ್ಲಿ ಸಿಐಎಫ್ ವ್ಯವಸ್ಥೆ ಮಾಡಲಾಗಿದ್ದು, ಓ ಪಟ್ಟಿಯಲ್ಲಿ ಶಿವಮೊಗ್ಗ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರು ನಗರಗಳೂ ಇವೆ. ವ್ಯವಸ್ಥೆಯೂ ಕ್ಲಸ್ಟರ್ಗಳ ಅಭಿವೃದ್ಧಿಗೆ ಪೂರಕವಾಗ ಕೆಲಸ ಮಾಡುತ್ತವೆ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರಿನ ಆಚೆಗಿನ ಪ್ರದೇಶಗಳಲ್ಲಿ ಆವಿಷ್ಕಾರ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಉತ್ತೇಜಿಸಲು, ಡಿಜಿಟಲ್ ಉದ್ಯಮವನ್ನು ಪ್ರೋತ್ಸಾಹಿಸಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ರಚಿಸಿಸಲಾಗಿದೆ. ಉದ್ಯಮಗಳ ಬೆಳವಣಿಗೆ- ಹೂಡಿಕೆಗಳನ್ನು ಆಕರ್ಷಿಸಿ ತಂತ್ರಜ್ಞಾನ ಉದ್ಯಮವನ್ನು ಮುನ್ನಡೆಸುವ ನಿಟ್ಟಿನಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಮಿಷನ್ ಕೆಲಸ ಮಾಡುತ್ತದೆ. ಈ ಮೂಲಕ ನಮ್ಮ ರಾಜ್ಯದ ಜಿಎಸ್ಡಿಪಿಯನ್ನು 30% ಹೆಚ್ಚಿಸುವ ಹಾಗೂ ಮುಂದಿನ 5 ವರ್ಷಗಳಲ್ಲಿ 30 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಕಾರ್ಯಸೂಚಿಯೊಂದಿಗೆ ಅದು ಕೆಲಸ ಮಾಡುತ್ತಿದೆ. ಅಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ಐಟಿ ರಫ್ತು ವಹಿವಾಟು 150 ಬಿಲಿಯನ್ ಡಾಲರ್ ಮೀರುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ಜಾಗತಿಕ ಮಟ್ಟದಲ್ಲಿ ದಾಪುಗಾಲು ಇಡುತ್ತಿದ್ದು, ವಿಶ್ವಶಕ್ತಿಯಾಗಿ ಹೊರಹೊಮ್ಮುವ ಎಲ್ಲ ಸಾಮರ್ಥ್ಯವೂ ನಮ್ಮ ರಾಜ್ಯಕ್ಕಿದೆ ಎಂದ ಅವರು; ಇವತ್ತು ಎಲ್ಲರೂ ಡಿಜಿಟಲ್ ಕೃಷಿಯ ಬಗ್ಗೆಯೂ ಮಾತನಾಡುತ್ತಿದ್ದಾರೆ. ರಾಜ್ಯವೂ ಈ ನಿಟ್ಟಿನಲ್ಲಿ ವೇಗಗತಿಯಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಪೂರಕವಾಗಿದೆ ಎಂದರು.
ರೈಲಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ;ಮಂಗಳೂರಿನಲ್ಲಿ ಆರೋಪಿಯ ಬಂಧನ -Vishwanews24
ಈ ಹಿನ್ನೆಲೆಯಲ್ಲಿ ಇಲ್ಲಿನ ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು, ಅಧಿಕಾರಿಗಳು ಹಾಗೂ ರಾಜಕೀಯ ನಾಯಕರನ್ನು ಒಳಗೊಂಡಂತೆ ಒಂದು ದೊಡ್ಡ ಚರ್ಚೆಯೂ ಆಗಲಿ. ಮಂಗಳೂರಿನಲ್ಲಿ 2023ರ ಹೊತ್ತಿಗೆ ವಾರ್ಷಿಕ ₹ 7,500 ಕೋಟಿ ಐಟಿ ವಹಿವಾಟು ನಡೆಸುವಷ್ಟು ಅನುಕೂಲವಿದೆ ಎಂದು ಒಂದು ಸಮೀಕ್ಷೆ ಹೇಳಿದೆ. ಮುಂದಿನ ದಿನಗಳಲ್ಲಿ ಮಂಗಳೂರಿಗೆ ಹೆಚ್ಚೆಚ್ಚು ಉದ್ಯಮಗಳು ಬರಲಿ, ಆ ಉದ್ಯಮಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅಲ್ಲ ಒಪ್ಪಿಗೆಗಳನ್ನು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

