ಮಂಗಳೂರು : ಗೋಡೆ ಬರಹ ಪ್ರಕರಣ : ಆರೋಪಿಗಳು ಹತ್ತು ದಿನ ಪೊಲೀಸ್‌ ಕಸ್ಟಡಿಗೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಗೋಡೆ ಬರಹ ಪ್ರಕರಣ : ಆರೋಪಿಗಳು ಹತ್ತು ದಿನ ಪೊಲೀಸ್‌ ಕಸ್ಟಡಿಗೆ -Vishwanews24

ಮಂಗಳೂರು,: ನಗರದ ಎರಡು ಕಡೆಗಳಲ್ಲಿ ಕಾಣಿಸಿಕೊಂಡ ಉಗ್ರರ ಪರ ಗೋಡೆಗ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಇಬ್ಬರು ಆರೋಪಿಗಳನ್ನು ಡಿ.9ರ ಬುಧವಾರದಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ಮನವಿಯಂತೆ ನ್ಯಾಯಾಲಯವು ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ತೀರ್ಥಹಳ್ಳಿ ನಿವಾಸಿಗಳಾದ ಶಾರೀಕ್‌ ಹಾಗೂ ಮಾಝ್‌‌‌ ಮುನೀರ್‌‌ ಎಂದು ತಿಳಿದುಬಂದಿದೆ. ಇಬ್ಬರು ಆರೋಪಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಪೊಲೀಸರ ಕೈ ಸೇರದ ಕಾರಣ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ.

ಇಬ್ಬರು ಆರೋಪಿಗಳ ಬಳಿ ಇದ್ದ ಮೊಬೈಲ್‌‌ ಫೋನ್‌ ಹಾಗೂ ಮಾಝ್‌‌ನ ಬಳಿ ಇದ್ದ ಲಾಪ್‌ಟಾಪ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿರುವ ಡೇಟಾವನ್ನು ರಿಟ್ರೈವ್‌ ಮಾಡಲು ತಂತ್ರಜ್ಞರಿಗೆ ನೀಡಿದ್ದಾರೆ. ಲಾಪ್‌‌ಟಾಪ್‌ನಲ್ಲಿರುವ ದಾಖಲೆಗಳು ಪೊಲೀಸರ ತನಿಖೆಗೆ ಹೆಚ್ಚಿನ ಬಲ ನೀಡುವ ಸಾಧ್ಯತೆ ಇದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾರೀಕ್‌ಗೆ ವಿದೇಶದಲ್ಲಿರುವ ಓರ್ವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವ್ಯಕ್ತಿಯ ಸಲಹೆಯ ಮೇರೆಗೆ ಗೋಡೆ ಬರಹಗಳನ್ನು ಬರೆದಿದ್ದ ಎನ್ನಲಾಗಿದೆ. ಅಲ್ಲದೇ, ಆ ವ್ಯಕ್ತಿಯೊಂದಿಗೆ ಇಂಟರ್‌ನೆಟ್‌‌‌ ಕರೆಗಳ ಮೂಲಕ ಸಂವಹನ ನಡೆಸುತ್ತಿದ್ದು, ಈ ಕೃತ್ಯಕ್ಕೆ ನಿರ್ದೇಶನ ನೀಡಿದ ವ್ಯಕ್ತಿ ಹಾಗೂ ಈ ಘಟನೆಯಲ್ಲಿ ಭಾಗಿಯಾದ ಸದಸ್ಯರು ಪುಣೆಯ ವಾಟ್ಸಾಪ್‌ ಗುಂಪಿನಲ್ಲಿರುವವರು ಎಂಬ ಮಾಹಿತಿಯ ಹಿನ್ನೆಲೆ ಪೊಲೀಸರು ಇನ್ನಷ್ಟು ಹೆಚ್ಚಿನ ತನಿಖೆ ಮಾಡಲು ತೀರ್ಮಾನಿಸಿದ್ದಾರೆ.