ಮಂಗಳೂರು : ರನ್ ವೇಯಿಂದ ಜಾರಿದ ವಿಮಾನ : ತನಿಖೆಗೆ ಸಚಿವ ಯು.ಟಿ. ಖಾದರ್ ಆಗ್ರಹ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು,: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ದುಬೈಯಿಂದ ಬಂದಿಳಿದ ವಿಮಾನ ರನ್ ವೇಯಿಂದ ಜಾರಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಲೋಪದ ಕುರಿತು ಹಾಗು ಘಟನೆಯ ಸಮಗ್ರ ಉನ್ನತ ತನಿಖೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಈ ಸಂಬಂಧ ನಾಗರೀಕ ವಿಮಾನಯಾನ ಮಹಾ ನಿರ್ದೇಶಕ (ಡಿಜಿಸಿಎ)ರೊಂದಿಗೆ ಹಾಗೂ ಸಚಿವಾಲಯದೊಂದಿಗೆ ಮಾತನಾಡಿರುವ ಸಚಿವರು, ಈ ಘಟನೆ ಪೈಲಟ್ ಅಥವಾ ವಿಮಾನದ ದೋಷದಿಂದಾಗಿದೆಯೇ, ಏರ್ ಪೋರ್ಟ್ ವ್ಯವಸ್ಥೆಯಲ್ಲಿ ಏನಾದರೂ ಕೊರತೆಯುಂಟಾಗಿದೆಯೇ ಎಂಬುದರ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕು. ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಉತ್ಕೃಷ್ಟ ಕಾಳಜಿ ವಹಿಸಬೇಕು, ಕೂಡಲೇ ಈ ಬಗ್ಗೆ ಸ್ಪಂದಿಸಬೇಕು ಎಂದು ಸಚಿವ ಖಾದರ್ ಆಗ್ರಹಿಸಿದ್ದಾರೆ.

ದುಬೈನಿಂದ ಮಂಗಳೂರಿಗೆ ಸುಮಾರು 6 ಗಂಟೆಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್ 814 ವಿಮಾನ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭ ರನ್ ವೇ ಬಿಟ್ಟು ಹೊರಗೆ ಜಾರಿದ್ದು, ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.